ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಪಶ್ಚಿಮ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿರುವ ಪಂಢರಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ಆಷಾಢ ಏಕಾದಶಿ ನಿಮಿತ್ತ ಶ್ರೀ ವಿಠ್ಠಲನ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಇಡೀ ಜಗತ್ತನ್ನು ಕರೊನಾ ಸಂಕಷ್ಟದಿಂದ ಕಾಪಾಡುವಂತೆ ಸಿಎಂ ಪ್ರಾರ್ಥಿಸಿದ್ದಾರೆ. ನಮ್ಮೆಲ್ಲರ ಕೈಗಳನ್ನು ಕಟ್ಟಿ ಹಾಕದಂತಾಗಿದೆ. ನಮ್ಮ ಬಳಿ ಔಷಧ ಅಥವಾ ಇನ್ನಾವುದೇ ಸಾಧನವಿಲ್ಲ. ಹೀಗಾಗಿ ನೀನೇ ಚಮತ್ಕಾರ ತೋರಿಸಬೇಕಿದೆ ಎಂದು ವಿಠ್ಠಲನಿಗೆ ಬಿನ್ನವಿಸಿದ್ದಾರೆ.
ಮಹಾರಾಷ್ಟ್ರದ ಸಿಎಂ ಹಾಗೂ ಅವರ ಪತ್ನಿ ಪಂಢರಾಪುರದ ವಿಠ್ಠಲನ ಸನ್ನಿಧಾನದಲ್ಲಿ ಆಷಾಢ ಏಕಾದಶಿಯ ಪೂಜೆ ನೆರವೇರಿಸುವುದು ಸಂಪ್ರದಾಯವಾಗಿದೆ. ಅಂತೆಯೇ ಉದ್ಧವ್ ಜತೆಗೆ ಪತ್ನಿ ರಶ್ಮಿ, ಪುತ್ರ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯ ಕೂಡ ಜತೆಗಿದ್ದರು.
ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ನಡೆಯುವ ವಾರಿ ಅಥವಾ ವಾರಿಕರಿ ಯಾತ್ರೆಯಲ್ಲಿ ಲಕ್ಷಾಂತರ ಜನರ ದೇಶ ಮೂಲೆ ಮೂಲೆಗಳಿಂದ ಕಾಲ್ನಡಿಗೆ ಮೂಲಕ ಪಂಡರಾಪುರಕ್ಕೆ ತಂಡೋಪತಂಡವಾಗಿ ಆಗಮಿಸುತ್ತಾರೆ. ಕರ್ನಾಟಕದಿಂದಲೂ ಸಹಸ್ರಾರು ಸಂಖ್ಯೆಯ ಆಸ್ತಿಕರು ಭಾಗವಹಿಸುತ್ತಾರೆ. ಆದರೆ, ಕೋವಿಡ್ ಕಾರಣದಿಂದಾಗಿ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.