ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿ ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ನೀಲೇಶ್ವರ ಕಣಿಚ್ಚರದ ರಹ್ಮಾನ್(5) ಮತ್ತು ಲಹೆಕ್ ನಬಾ (12) ಮೃತ ಮಕ್ಕಳು.
ಝುಹರಾ (40), ಶೆರಿನ್(15), ಕಾರು ಚಾಲಕ ಫಾಯಿಝ್, ಬಸ್ ಪ್ರಯಾಣಿಕರಾದ ಸೂರ್ಯ, ಅನಿಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಝುಹರಾ ಮತ್ತು ಶೆರಿನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕಣ್ಣೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಕಾರಿನಲ್ಲಿದ್ದವರನ್ನು ಹೊರತೆಗೆದರೂ ಅಷ್ಟರಲ್ಲಿ ಮಕ್ಕಳಿಬ್ಬರು ಕೊನೆಯುಸಿರೆಳೆದಿದ್ದರು. ಗಾಯಗೊಂಡವರನ್ನು ಕಾಞಂಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.