ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ನಂದನವನ ಜಂಕ್ಷನ್ ನಲ್ಲಿ ಒಂದೇ ದಿನದಲ್ಲಿ ಎರಡು ಅಪಘಾತಗಳು ನಡೆದಿದ್ದು, ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ನಡೆದಿದೆ..
ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರರನ್ನು ಕುಪ್ಪಯ್ಯ ಹಾಗೂ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಕುಪ್ಪಯ್ಯ ಎಂಬ ವ್ಯಕ್ತಿಯು ಚಂದ್ರ ಎಂಬುವರನ್ನು ತನ್ನ ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆಗೆ ನಂದನವನ ಜಂಕ್ಷನ್ ನಲ್ಲಿ ಬಲ ಬದಿ ರಸ್ತೆಗೆ ತಿರುವು ಪಡೆಯುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಸೆಲಾರಿಯೋಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರರು ರಸ್ತೆಗೆ ಬಿದ್ದು ಸ್ಕೂಟಿ ಚಲಾಯಿಸುತ್ತಿದ್ದ ಕುಪ್ಪಯ್ಯ ರವರ ತಲೆಗೆ ತೀವ್ರಸ್ವರೂಪದ ಪೆಟ್ಟಾಗಿ ಕೈ ಕಾಲುಗಳಿಗೂ ತಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮಣಿಪಾಲ ಖಾಸಗೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆಗೆಯೇ ಅವರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಪಘಾತದಲ್ಲಿ ಗಾಯಾಗೊಂಡಿದ್ದ ಹಿಂಬದಿ ಸವಾರ ಚಂದ್ರ ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ದಿನ ರಾತ್ರಿ 8.35ರ ಸುಮಾರಿಗೆ ಸುಬ್ರಹ್ಮಣ್ಯ ಎಂಬಾತ ತನ್ನ ಕೆಟಿಎಂ ಬೈಕಿನಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದು, ಹಿಂದಿನಿಂದ ಬಂದು ಟಿಪ್ಪರ್ ಲಾರಿ ಓವರ್ ಟೇಕ್ ಮಾಡಿ ಸೂಚನೆ ನೀಡದೇ ಬಲಬದಿಯ ನಂದನವನ ಜಂಕ್ಷನ್ ನಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಈ ಸಂದರ್ಭ ನಿಯಂತ್ರಣ ತಪ್ಪಿ ಬೈಕ್ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದಾನೆ.
ಇನ್ನು ಆಸ್ಪತ್ರೆಗೆ ಕರೆದುಕೊಂಡುವ ಹೋಗುವಾಗ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಬೈಂದೂರು ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.