ಮಂಗಳೂರು; ಪತ್ನಿ ಹಾಗೂ ಮಗುವನ್ನು ಕೊಲೆಗೈದು ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮೃತ ಪ್ರಿಯಾಂಕ ಮನೆಯವರು ಇದೀಗ ಅತ್ತೆ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಮೃತ ಕಾರ್ತಿಕ್ ಭಟ್ ಅವರ ಪತ್ನಿ ಪ್ರಿಯಾಂಕ ಕುಟುಂಬ ಮಂಗಳೂರಿಗೆ ಆಗಮಿಸಿದ್ದು, ಕಾರ್ತಿಕ್ ಭಟ್ ಕುಟುಂಬದ ಮೇಲೆ ಆರೋಪ ಮಾಡಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹಗಳ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಶವಾಗಾರಕ್ಕೆ ಆಗಮಿಸಿದ ಶಿವಮೊಗ್ಗ ಮೂಲದ ಪ್ರಿಯಾಂಕ ಕುಟುಂಬಸ್ಥರು ಮಾಧ್ಯಮಗಳ ಜೊತೆ ಮಾತನಾಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಭಟ್ ಬಹಳ ಒಳ್ಳೆಯ ಗುಣ ಸ್ವಭಾವದ ವ್ಯಕ್ತಿಯಾಗಿದ್ದ. ನಮ್ಮ ಕುಟುಂಬಕ್ಕೂ ಕಾರ್ತಿಕ್ ಬಹಳ ಇಷ್ಟವಾಗಿದ್ದ. ಕಾರ್ತಿಕ್ ತನ್ನ ಹೆಂಡತಿ ಮಗುವಿನೊಂದಿಗೆ ಬಹಳ ಅನ್ಯೋನ್ಯವಾಗಿದ್ದ ಎಂದರು. ಕಳೆದ ಬಾರಿ ದಸರಾಗೆ ಬಂದಾಗಲೂ ತುಂಬಾ ಖುಷಿಯಲ್ಲಿದ್ದರು. ಅಲ್ಲದೆ ಬೇರೆ ಮನೆ ಮಾಡೋಕೆ ತುಂಬಾ ಕಡೆ ಹುಡುಕಾಟವೂ ಮಾಡಿದ್ದರು ಎಂದರು .
ಕಾರ್ತಿಕ್ ಹೆತ್ತವರು ಇವರಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಕಾರ್ತಿಕ್ ಅಕ್ಕನೂ ಈ ಕುಟುಂಬಕ್ಕೆ ಕಿರಿ ಕಿರಿ ಮಾಡಿದ್ದಾರೆ. ಕಳೆದ ದೀಪಾವಳಿ ಸಂದರ್ಭದಲ್ಲೂ ಗಲಾಟೆಯಾಗಿದೆ. ಈ ಹಿನ್ನಲೆ ಬೀಚ್ ಬಳಿ ಹೋಗಿ ಕಾರ್ತಿಕ್ ಕುಟುಂಬ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡಿದ್ದರು. ಮನೆಯಲ್ಲಿ ತಂದೆ ತಾಯಿ ಕಿರಿ ಕಿರಿ ಮಾಡಿದ ಹಿನ್ನಲೆ ಬೀಚ್ ಬಳಿ ಹೋಗಿದ್ದರು. ಕಾರ್ತಿಕ್ ಗೆ ಯಾವುದೇ ಆರ್ಥಿಕವಾದ ಸಮಸ್ಯೆ ಇರಲಿಲ್ಲ, ಅಲ್ಲದೆ ಕಾರ್ತಿಕ್ ತನ್ನ ಪತ್ನಿ ಜೊತೆಯೂ ಗಲಾಟೆ ಮಾಡುತ್ತಿರಲಿಲ್ಲ. ಹೆಂಡತಿ ಜೊತೆ ಜಗಳವಾಡಿ ಹತ್ಯೆ ಮಾಡಿದ್ದಾನೆ ಎಂಬುವುದಾಗಿಯೂ ಬಂದಿದೆ.ಈ ವಿಚಾರ ಸುಳ್ಳು,ಆ ತರ ಯಾವುದೇ ಘಟನೆಗಳು ನಡೆದಿಲ್ಲ. ಕಾರ್ತಿಕ್ ಕೊಲೆ ಮಾಡುವಂತಹ ಕಠೋರ ಮನಸ್ಸಿನ ವ್ಯಕ್ತಿ ಅಲ್ಲ. ಈ ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಪೊಲೀಸರು ಘಟನೆಯ ಬಗ್ಗೆ ಸೂಕ್ತವಾದ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.


