ಚೆನ್ನೈ: ಆಸ್ಪತ್ರೆಯಿಂದ ಕಣ್ಮರೆಯಾದ ರೋಗಿಯೊಬ್ಬರ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಚೆನ್ನೈ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊನೆಗೆ ಪ್ರಕರಣದ ಹಿಂದಿನ ಅಸಲಿಯತ್ತು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಿಂದ ಕಳೆದ ಮೇ ತಿಂಗಳಿನಲ್ಲಿ ಸುಮಿತಾ (41) ಎಂಬಾಕೆ ಕಾಣೆಯಾಗಿದ್ದರು. ಪೊಲೀಸರಿಗೆ ಸುಮಿತಾ ಪತಿ ಮೌಲಿ ಮೇ 31ರಂದು ನೀಡಿರುವ ದೂರಿನ ಪ್ರಕಾರ ಮೇ 23ರಂದು ಸುಮಿತಾ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ನಡೆಸಿದ್ರೂ ಆಕೆಯ ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಇದರ ನಡುವೆ ಜೂನ್ 8ರಂದು ಆಸ್ಪತ್ರೆಯ ಸಿಬ್ಬಂದಿಗೆ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವೊಂದು 3ನೇ ಟವರ್ನ 8ನೇ ಮಹಡಿಯಲ್ಲಿ ಪತ್ತೆಯಾಗಿದೆ. ಬಳಿಕ ದೇಹವನ್ನು ಶವಗಾರಕ್ಕೆ ಸಾಗಿಸಿ ಪರಿಶೀಲಿಸಿದಾಗ ಅದು . ನಾಪತ್ತೆಯಾಗಿದ್ದ ಮಹಿಳೆಯದ್ದೇ ಶವ ಎಂದು ಸಂಶಯ ವ್ಯಕ್ತಪಡಿಸಲಾಗುತ್ತದೆ. ನಂತರ ಮಹಿಳೆಯ ಪತಿ ಮೌಲಿಗೆ ಮೃತದೇಹ ಗುರುತು ಪತ್ತೆಹಚ್ಚುವಂತೆ ಹೇಳಲಾಗುತ್ತದೆ. ಬಟ್ಟೆಯನ್ನು ನೋಡಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ತನ್ನ ಪತ್ನಿಯದ್ದೇ ಎಂದು ಆತ ಗುರುತು ಹಿಡಿಯುತ್ತಾನೆ.
ಇದಾದ ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾರೆ. ಮೇ 23ರಂದು ಏನು ನಡೆಯಿತು ಎಂದು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಕೆಲಸಗಾರ್ತಿ ರಾಧಿದೇವಿ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ.
ರಾಧಿದೇವಿಗೆ ಹಣದ ಅವಶ್ಯಕತೆ ಇರುತ್ತದೆ. ಈ ವೇಳೆ ಸಣ್ಣ ಚೀಲದಲ್ಲಿ ಸ್ವಲ್ಪ ಹಣವನ್ನು ಸಾಗಿಸುತ್ತಿದ್ದ ಸುಮಿತಾ ಕಣ್ಣಿಗೆ ಬಿದ್ದಿದ್ದಾಳೆ. ಇತ್ತ ಸುಮಿತಾ ಅವರ ಆರೋಗ್ಯವು ಕ್ಷೀಣಿಸುತ್ತಿದೆ ಮತ್ತು ಅವಳನ್ನು ನೋಡಿಕೊಳ್ಳಲು ಯಾರ ಇರಲಿಲ್ಲ ಎಂಬವು ಆಕೆಗೆ ತಿಳಿದಿತ್ತು. ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ರಾಧಿದೇವಿ ಸುಮಿತಾಳ ಬಳಿ ಸುಲಿಗೆ ಮಾಡಲು ಸಂಚು ರೂಪಿಸುತ್ತಾಳೆ.
ಮೇ 22ರ ಮಧ್ಯರಾತ್ರಿ 12.30ರ ಸುಮಾರಿಗೆ ಸುಮಿತಾ ಬೆಡ್ ಬಳಿ ಹೋಗುವ ರಾಧಿದೇವಿ, ಸ್ಕ್ಯಾನ್ ಮಾಡಿಸಬೇಕೆಂದು ಸುಳ್ಳು ಹೇಳಿ ಕರೆದೊಯ್ಯುತ್ತಾಳೆ. ವಾರ್ಡ್ನಿಂದ ವ್ಹೀಲ್ಚೇರ್ ಮೂಲಕ ಲಿಫ್ಟ್ ಬಳಿ ಕರೆದೊಯ್ಯುತ್ತಾಳೆ. ಬಳಿಕ ಆಕೆಯ ಸೆಲ್ಫೋನ್ ಮತ್ತು ಹಣವನ್ನು ಸುಲಿಗೆ ಮಾಡಿದ ನಂತರ 8ನೇ ಮಹಡಿಗೆ ಬಲವಂತವಾಗಿ ಎಳೆದೊಯ್ದು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.