ಬಂಟ್ವಾಳ;ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ನಾಪತ್ತೆಯಾಗಿ ಎರಡುಗಳಾಗುತ್ತಾ ಬಂದರೂ ಇನ್ನೂ ಆತನ ಸುಳಿವು ಸಿಕ್ಕಿಲ್ಲ. ಈ ಕುರಿತು ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಯತೀಶ್ ನೇತೃತ್ವದಲ್ಲಿ ಮತ್ತಷ್ಟು ತನಿಖೆ ಚುರುಕುಗೊಂಡಿದೆ.
ಇನ್ನು ಬಾಲಕ ದಿಗಂತ್ ನಾಪತ್ತೆ ಕುರಿತು ಶಂಕೆ ವ್ಯಕ್ತವಾದ ಎಲ್ಲಾ ಆಯಾಮಗಳಲ್ಲಿ ಕೂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರ ಮಧ್ಯೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಹಿತಿಗಳ ಪ್ರಕಾರ ದಿಗಂತ್ ನನ್ನು ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬಿ.ಸಿ ರೋಡಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದ ಹಲವಾರು ದಿನಗಳ ನಂತರ ಮಂಗಳಮುಖಿಯಾಗಿ ಪತ್ತೆಯಾಗಿದ್ದ. ಆತನನ್ನು ಅಪಹರಿಸಿ ನಂತರ ಮಂಗಳಮುಖಿಯಾಗಿ ಪರಿವರ್ತಿಸಿರುವ ಘಟನೆ ಅಂದು ನಡೆದಿತ್ತು. ಮಾತ್ರವಲ್ಲದೇ ಬಂಟ್ವಾಳ ತಾಲ್ಲೂಕಿನಲ್ಲಿ ಮತ್ತೊಬ್ಬ ಯುವಕನನ್ನು ಕೂಡ ಇದೇ ರೀತಿಯಾಗಿ ಮಂಗಳಮುಖಿಯಾಗಿ ಪರಿವರ್ತನೆ ಮಾಡಿರುವುದು ಕಂಡು ಬಂದಿತ್ತು. ನಂತರ ಸುದ್ದಿಗೋಷ್ಟಿ ಕರೆದು ನನ್ನನ್ನು ಯಾರು ಕೂಡ ಅಪಹರಿಸಿಲ್ಲ ನನ್ನ ಸ್ವಇಚ್ಛೆಯಿಂದ ಹೋಗಿರುವುದು ಎಂಬ ಹೇಳಿಕೆಯ ಆಧಾರದ ಹಿನ್ನೆಲೆಯಿಂದ ಈ ರೀತಿಯ ಒಂದು ಅನುಮಾನ ಕೂಡ ವ್ಯಕ್ತವಾಗಿದ್ದು, ಪೊಲೀಸರು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ಕೂಡ ತನಿಖೆ ಮುಂದುರಿಸಿದ್ದಾರೆ ಎನ್ನಲಾಗಿದೆ.