ಹೈದರಾಬಾದ್: ವಂಚನೆ ಮಾಡಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಟಾಲಿವುಡ್ನ ಪ್ರಖ್ಯಾತ ನಿರೂಪಕಿ ಶ್ಯಾಮಲಾ ಪತಿ ನರಸಿಂಹ ರೆಡ್ಡಿಯನ್ನು ತೆಲಂಗಾಣದ ರಾಯದುರ್ಗ ಪೊಲೀಸರು ಬಂಧಿಸಿದ್ದಾರೆ.
ಸುಮಾರು 1 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಮರಳಿಸುವಂತೆ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾನೆಂದು ನರಸಿಂಹ ವಿರುದ್ಧ ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಪತಿಯ ಬಂಧನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ನಿರೂಪಕಿ ಶ್ಯಾಮಲಾ, ಸತ್ಯ ಹೊರಬರಲಿದೆ. ನಾನು ತುಂಬಾ ದಣಿದಿದ್ದ ಕಾರಣ ಹೈದರಾಬಾದ್ನಲ್ಲಿರುವ ನನ್ನ ಅತ್ತೆ ಮನೆಗೆ ನಾನು ತೆರಳಿದೆ. ನನಗೆ ಸ್ವಲ್ಪ ಜ್ವರವೂ ಇತ್ತು. ಸೋಮವಾರ ತೆರಳಿದ ನನ್ನ ಪತಿ ಮತ್ತೆ ಹಿಂದಿರುಗಲಿಲ್ಲ. ಏನೋ ಕೆಲಸ ಇರಬಹುದು ಅಂದುಕೊಂಡೆ. ಆದರೆ, ಅವರು ಬಂಧನವಾಗಿರುವ ಸುದ್ದಿ ಮಾಧ್ಯಮದಿಂದ ತಿಳಿಯಿತು ಎಂದು ಶ್ಯಾಮಲಾ ಹೇಳಿದ್ದಾರೆ.
ನನ್ನ ಪತಿಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾವಿಬ್ಬರು ಮದುವೆ ಆಗಿ 10 ವರ್ಷ ಕಳೆದಿವೆ. ಅವರ ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ವ್ಯಕ್ತಿಯೇ ಅಲ್ಲ ಎಂದಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಕೇವಲ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವರದಿ ಮಾಡಬೇಡಿ ಎಂದು ಶ್ಯಾಮಲಾ ಮಾಧ್ಯಮದವರನ್ನು ಮನವಿ ಮಾಡಿದ್ದಾರೆ.
ಸಂಪೂರ್ಣ ತನಿಖೆ ಮಾಡಲು ಪೊಲೀಸರಿಗೆ ಅವಕಾಶ ಮಾಡಿಕೊಡಿ. ಸತ್ಯ ಏನಿದೆ ಅದು ಹೊರಬರಲಿದೆ. ಆ ಬಳಿಕ ವಿಸ್ತೃತವಾಗಿ ಚರ್ಚಿಸೋಣ ಎಂದು ಶ್ಯಾಮಲಾ ಹೇಳಿದ್ದಾರೆ.
.