ಕೊಲ್ಕತ್ತಾ: ಚೀನಾ ಆಪ್ ಟಿಕ್ಟಾಕ್ ಬ್ಯಾನ್ ಮಾಡಿರುವುದು ಕೇಂದ್ರ ಸರ್ಕಾರದ ಆತುರ ನಿರ್ಧಾರ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಖಂಡಿಸಿದ್ದಾರೆ.
ಕೊಲ್ಕತ್ತಾದಲ್ಲಿ ಇಂದು ಇಸ್ಕಾನ್ ಆಡಳಿತ ಮಂಡಳಿ ಆಯೋಜಿಸಿದ್ದ ರಥ ಯಾತ್ರೆ ಸಂಭ್ರಮದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಟಿಕ್ ಟಾಕ್ ಒಂದು ಮನರಂಜನಾ ಆಪ್. ಇದು ಹಠಾತ್ ನಿರ್ಧಾರ. ಈ ಯೋಜನೆ ಹಿಂದಿನ ಕಾರ್ಯತಂತ್ರವೇನು? ನಿರುದ್ಯೋಗಿಗಳಾಗುತ್ತಿರುವ ಜನರ ಕಥೆಯೇನು? ನೋಟು ಬ್ಯಾನ್ನಲ್ಲಿ ತೊಂದರೆಗೆ ಒಳಗಾದ ರೀತಿ ಜನರು ಬಳಲುತ್ತಾರೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನಿಷೇಧ ಮಾಡಿರುವ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ” ಎಂದು ನುಸ್ರತ್ ಜಹಾನ್ ಎಎನ್ಐಗೆ ತಿಳಿಸಿದ್ದಾರೆ.
ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್ ಸೇರಿದಂತೆ ಚೀನಾ 59 ಆಪ್ಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ನಿಷೇಧ ಮಾಡಿದೆ. ರಾಷ್ಟ್ರೀಯ ಭದ್ರತೆ ಕಾರಣ ನೀಡಿ ಈ ಆಪ್ಗಳ ಮೇಲೆ ನಿರ್ಬಂಧ ಹೇರಿದೆ.