
ಸುಬ್ರಮಣ್ಯ: ಕರಾವಳಿ ಭಾಗದ ಜನರ ಬಹುದಿನಗಳ ನಿರೀಕ್ಷೆಯಂತೆ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಆಷಾಢ ಅಮಾವಾಸ್ಯೆಯ ಶುಭ ದಿನದಂದು ಚಾಲನೆ ನೀಡಿದೆ.
ಸುಬ್ರಹ್ಮಣ್ಯ ನೆಟ್ಟಣ ಮತ್ತು ಸಕಲೇಶಪುರ ನಡುವಿನ ಕಡಿದಾದ ಘಾಟ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಕೇಸರಿ ಬಣ್ಣದ 20 ಬೋಗಿಗಳ ವಂದೇ ಭಾರತ್ ರೈಲು ತನ್ನ ಮೊದಲ ಪ್ರಯಾಣ ಆರಂಭಿಸಿತು. ಸುರಕ್ಷತಾ ಪರೀಕ್ಷೆಯ ಭಾಗವಾಗಿ ಪ್ರಯಾಣಿಕರ ಬದಲಿಗೆ ಬೋಗಿಗಳಲ್ಲಿ ಮರಳಿನ ಚೀಲಗಳನ್ನು ತುಂಬಿಸಿ, ವಿಭಿನ್ನ ವೇಗಗಳಲ್ಲಿ ಹಳಿಗಳ ಮೇಲೆ ರೈಲನ್ನು ಚಲಾಯಿಸಿ ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತಿದೆ.
ಸಾಮಾನ್ಯವಾಗಿ ಕಡಿದಾದ ಘಾಟ್ ಹಳಿಗಳಲ್ಲಿ ರೈಲುಗಳ ಚಲನೆಗೆ ಬ್ಯಾಂಕರ್ ಇಂಜಿನ್ಗಳ ಅಗತ್ಯವಿರುತ್ತದೆ. ಆದರೆ, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಬಂದಿರುವ ಈ ವಂದೇ ಭಾರತ್ ರೇಕ್ನಲ್ಲಿ ಅತ್ಯಾಧುನಿಕ ‘ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್’ ತಂತ್ರಜ್ಞಾನ ಅಳವಡಿಸಲಾಗಿದೆ.
ರೈಲ್ವೆ ಸುರಕ್ಷತಾ ವಿಭಾಗದ ಕಟ್ಟುನಿಟ್ಟಿನ ತಪಾಸಣೆಗಳ ಬಳಿಕ ಪ್ರಯೋಗಾರ್ಥ ಓಡಾಟಕ್ಕೆ ಹಸಿರು ನಿಶಾನೆ ದೊರೆತಿದ್ದು, ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ ಪೂರ್ಣಪ್ರಮಾಣದ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಬೆಳವಣಿಗೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಲ್ಲಿ ಸಂತಸ ಮೂಡಿದೆ.


