ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಕೊನೆಯ ಹಂತದ ಸಿದ್ಧತೆಗಳು ಆರಂಭವಾಗಿದ್ದು, ಹಾಸನ-ಮಂಗಳೂರು ರೈಲು ವಿಭಾಗದ ಹೊಸದಾಗಿ ವಿದ್ಯುದ್ದೀಕರಿಸಲಾದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ಮಾರ್ಗದಲ್ಲಿ ಜೂನ್ 1 ರಿಂದ ಆರ್ಡಿಎಸ್ಒ (RDSO) ತಂಡವು ವಿವಿಧ ಲೋಡ್ಗಳೊಂದಿಗೆ ಹೈಟೆಕ್ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಿದೆ.
ಸುಮಾರು ಒಂದು ವಾರ ನಡೆಯಲಿರುವ ಈ ಪರೀಕ್ಷೆಗಳ ಬಳಿಕ ರೈಲ್ವೆ ಸಚಿವಾಲಯಕ್ಕೆ ಹಸಿರು ನಿಶಾನೆ ಸಿಗಲಿದ್ದು, ಜೂನ್ ತಿಂಗಳಿನಲ್ಲೇ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.
ಭಾರತೀಯ ರೈಲ್ವೆಯಲ್ಲೇ ಅತ್ಯಂತ ಸವಾಲಿನದ್ದಾಗಿರುವ 55 ಕಿ.ಮೀ. ಉದ್ದದ ಈ ಘಾಟ್ ಮಾರ್ಗವು ಕಡಿದಾದ ಇಳಿಜಾರು, 57 ಸುರಂಗಗಳು, 258 ಸೇತುವೆಗಳು ಹಾಗೂ 108 ತೀಕ್ಷ್ಣ ತಿರುವುಗಳನ್ನು ಹೊಂದಿದೆ. ಒಟ್ಟು 400 ಕಿ.ಮೀ. ರೈಲು ಮಾರ್ಗದ ವಿದ್ಯುದ್ದೀಕರಣ ಕಾರ್ಯವನ್ನು ₹729.28 ಕೋಟಿ ಪರಿಷ್ಕೃತ ವೆಚ್ಚದಲ್ಲಿ ‘ರೈಟ್ಸ್’ ಸಂಸ್ಥೆ ಪೂರ್ಣಗೊಳಿಸಿದ್ದು, ಇದರಲ್ಲಿ ಘಾಟ್ ವಿಭಾಗದ ವಿದ್ಯುದ್ದೀಕರಣಕ್ಕೆ ಮಾತ್ರ ₹93.55 ಕೋಟಿ ವೆಚ್ಚವಾಗಿದೆ. ಇಲ್ಲಿನ ಓವರ್ಹೆಡ್ ವೈಯರಿಂಗ್ ಅನ್ನು ಗರಿಷ್ಠ 120 ಕಿಮೀ/ಗಂ ವೇಗಕ್ಕೆ ವಿನ್ಯಾಸಗೊಳಿಸಲಾಗಿದ್ದು, ಸದ್ಯದಲ್ಲೇ ಕರಾವಳಿ ಮತ್ತು ರಾಜಧಾನಿ ನಡುವಿನ ಹೈಟೆಕ್ ಪ್ರಯಾಣ ಸಾಕಾರಗೊಳ್ಳಲಿದೆ.


