ಚಾರ್ಮಾಡಿ: ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ಬಳಿ ರಸ್ತೆ ಕುಸಿತ ಸಂಭವಿಸಿದ ಪರಿಣಾಮ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಚಾರ್ಮಾಡಿ ಘಾಟ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಆದರೆ, ಚಾರ್ಮಾಡಿ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಳವಾದ ಕಾರಣ ಇಂದು ಬೆಳಗ್ಗಿನಿಂದಲೇ ಕೊಟ್ಟಿಗೆಹಾರದ ಮಲಯಮಾರುತದಿಂದ ಶುರುವಾಗಿ ಚಾರ್ಮಾಡಿ ಘಾಟ್ ರಸ್ತೆಯ ಎಲ್ಲ ತಿರುವುಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ಜನ ಸಮಸ್ಯೆ ಎದುರಿಸುವಂತಾಗಿದೆ.
ಭಾರೀ ಮಳೆಯಿಂದಾಗಿ ಚಾರ್ಮಾಡಿ ಮಾರ್ಗದಲ್ಲಿ ಮರಗಳು ನೆಲಕ್ಕುರುಳಲಾರಂಭಿಸಿದ ಕಾರಣ ಚಾರ್ಮಾಡಿ ಘಾಟ್ ಮಾರ್ಗವನ್ನು ಸಂಜೆ 7 ರಿಂದ ಬೆಳಗ್ಗೆ 6 ರ ತನಕ ಬಂದ್ ಮಾಡಿ ಈಗಾಗಲೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುವ ಎಲ್ಲಾ ವಾಹನಗಳು ಬೆಳಗ್ಗೆ 6 ಗಂಟೆಯ ನಂತರವೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಲು ಆದೇಶ ಇರುವ ಕಾರಣ ವಾಹನಗಳು ಕೊಟ್ಟಿಗೆ ಹಾರ ಚೆಕ್ ಪೋಸ್ಟ್ ಬಳಿ ಬೆಳಗ್ಗಿನವರೆಗೆ ಕಾಯಬೇಕಾಗುತ್ತದೆ. ರಾತ್ರಿ ಸಂಚರಿಸುವ ಬಸ್ ಗಳು ಮತ್ತು ಗೂಡ್ಸ್ ಗಾಡಿಗಳಿಂದಾಗಿ ಚಾರ್ಮಾಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಕೆಲ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು.