ಕಾಸರಗೊಂಡು: ಕಾಸರಗೋಡಿನ ಕುಂಬಳೆಯ ಕುಮಾರಿ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ.
ಅಮೃತಾ ಜೋಶಿ ಮಂಗಳೂರಿನ ಕೆನರಾ ಹೈಸ್ಕೂಲ್ನ ಹಳೇ ವಿದ್ಯಾರ್ಥಿನಿ ಕೂಡ ಹೌದು. ಇವರು ತಮ್ಮ ತಂದೆಯ ಇಚ್ಛೆಯಂತೆ ಬೈಕ್ ರೈಡಿಂಗ್ ಅನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಅಮೃತಾ ಜೋಷಿ ಫೆ.4 ರಂದು ಕ್ಯಾಲಿಕಟ್ನಿಂದ ಪಯಣ ಆರಂಭಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸುತ್ತಿದ ಬಳಿಕ ಈಶಾನ್ಯ ದೇಶಗಳಿಗೆ ತಲುಪಿದ್ದರು. ಚೀನಾ ಬಾರ್ಡರ್ ತವಾಂಗ್ನಲ್ಲಿ ಪಯಣ ಕೊನೆಗೊಳಿಸುವ ಗುರಿ ಹೊಂದಿದ್ದ ಅಮೃತಾ ಅಲ್ಲಿಂದ ಎಪ್ರಿಲ್ 8ರಂದು ಮತ್ತೆ ಪಯಣ ಮುಂದುವರಿಸುವ ನಿರ್ಧಾರ ಮಾಡಿದರು.
ಅಲ್ಲಿಂದ ನೇಪಾಳ, ಮ್ಯಾನ್ಮಾರ್ ದೇಶಗಳಿಗೂ ತೆರಳಿದ್ದರು. ವಾಪಸ್ ಬರುವ ವೇಳೆ ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾದರು. ಆ ವೇಳೆ ಕೆಟಿಎಂ ಬೈಕ್ ಸಂಪೂರ್ಣ ಹಾಳಾಗಿದೆ. ಅಮೃತಾ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯಂತೆ ಒಂದು ತಿಂಗಳು ಊರಿಗೆ ಬಂದು ವಿಶ್ರಾಂತಿ ತೆಗೆದುಕೊಂಡ ನಂತರ ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಬೇರೊಂದು ಬೈಕ್ ತೆಗೆದುಕೊಂಡು ಹೋಗಿ ಅಲ್ಲಿಂದ ಪಯಣ ಮುಂದುವರಿಸಿದ್ದರು. ಲಡಾಖ್, ಪಂಜಾಬ್, ರಾಜಸ್ಥಾನ ಜರ್ನಿ ಮುಗಿಸಿ ಇಂದು ಕರ್ನಾಟಕಕ್ಕೆ ಬಂದಿರುವ ಅಮೃತಾ ಇಂದು ತಾನು ವ್ಯಾಸಂಗ ಮಾಡಿದ ಮಂಗಳೂರಿನ ಕೆನರಾ ಹೈಸ್ಕೂಲ್ ಗೆ ಆಗಮಿಸಿದ್ದಾಳೆ. ಅಲ್ಲದೇ ಇಂದೇ ಕೇರಳ ತಲುಪಿ ಪಯಣ ಕೊನೆಗೊಳಿಸಲಿದ್ದಾರೆ.