ಹೆಬ್ರಿ: ಸ್ವಿಫ್ಟ್ ಕಾರಿನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗೂ ಓರ್ವ ಆರೋಪಿಯನ್ನು ಹೆಬ್ರಿ ಠಾಣೆ ಪೊಲೀಸರು ಜು. 3ರಂದು ವಶಪಡಿಸಿಕೊಂಡಿದ್ದಾರೆ. ಆರೋಪಿ ಶಕೀಲ್ ಅಹಮ್ಮದ್ ಟಿ.ಕೆ. ಅವನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಒಂದು ದನ ಆರೋಪಿಗಳು ನೀಡಿದ ಚಿತ್ರಹಿಂಸೆಯಿಂದಾಗಿ ಮೃತಪಟ್ಟಿದೆ.
ಭಾನುವಾರ ರಾತ್ರಿ 8:30ರ ವೇಳೆ ಹೆಬ್ರಿ ಪಿಎಸ್ಐ ಸುದರ್ಶನ್ ದೊಡಮನಿ ತನ್ನ ಸಿಬ್ಬಂದಿ ಜತೆ ಹೆಬ್ರಿ ತಾಲೂಕು ಚಾರಾದ ನವೋದಯ ಶಾಲೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬೇಳಂಜೆ ಕಡೆಯಿಂದ ಮಾರುತಿ ಸ್ವಿಫ್ಟ್ ಕಾರು (KA.53.MB.6960) ಅತಿವೇಗವಾಗಿ ಬರುತ್ತಿತ್ತು. ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಚಾಲಕ ಮತ್ತಷ್ಟು ವೇಗವಾಗಿ ಹೆಬ್ರಿ ಕಡೆಗೆ ಚಲಾಯಿಸಿದ್ದು, ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಸ್ವಿಫ್ಟ್ ಕಾರು ಚಾರಾ ಸರ್ಕಲ್ ಬಳಿ ಸಾಗಿ, ಬ್ರಹ್ಮಾವರ ರಸ್ತೆಯಲ್ಲಿ ಹೋಗಿ ಮಂಡಾಡಿಜೆಡ್ಡು ಕಡೆಗೆ ಹೋಗುವ ರಸ್ತೆಗೆ ತಿರುಗಿದೆ. ಕೆರೆಬೆಟ್ಟು ಗ್ರಾಮದ ಕೆರೆಬೆಟ್ಟು ಮಹಾಲಿಂಗ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಇಳಿದು ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸರು ಈ ಪೈಕಿ ಶಕೀಲ್ ಅಹಮ್ಮದ್ ಟಿ.ಕೆ. ಎಂಬವನನ್ನು ಬೆನ್ನಟ್ಟಿ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇನ್ನೊಬ್ಬ ಕತ್ತಲ ಮರೆಯಲ್ಲಿ ಕಾಡಿನೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ.