ಕೊಳ್ಳೇಗಾಲ: ನಗರದ ಹೊಸ ಅಣಗಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್ ) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವರ್ಷ ಮತ್ತು ತಂಡ ಅ.22 ಮಂಗಳವಾರದಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮೈಸೂರು ಆಶೋಕಪುರಂ ನಿವಾಸಿ ವಸಂತ ಕುಮಾರ್(50) ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ವೈರಮುಡಿ(40) ಎನ್ನಲಾಗಿದೆ
ನಗರದ ಹೊಸ ಅಣಗಳ್ಳಿ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತ. ಡಿ.ವೈ ಎಸ್ ಪಿ ಧರ್ಮೇಂದ್ರ, ಸಿಐ ಶಿವಮಾದಯ್ಯ ರವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ಕಾದು ಕುಳಿತಿದ್ದ ಪೊಲೀಸರು, ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿದ್ದ 4 ಕೆ.ಜಿ. 386 ಗ್ರಾಂ ತಿಮಿಂಗಿಲ ವಾಂತಿ ಪತ್ತೆಯಾಗಿದೆ. ಆರೋಪಿಗಳ ಸಹಿತ ಅಕ್ರಮವಾಗಿ ಸಾಗಿಸುತ್ತಿದ್ದ ತಿಮಿಂಗಿಲದ ವಾಂತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.