ಪುತ್ತೂರು ಜಾತ್ರೆಯಲ್ಲಿ ಮಹಿಳೆಯ ಸರ ಕದಿಯುತ್ತಿದ್ದಾಗ ನಕಲಿ ಮಂಗಳಮುಖಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಜಾತ್ರಾ ಗದ್ದೆಯಲ್ಲಿ ಮಂಗಳಮುಖಿಯರ ವೇಷ ಧರಿಸಿದ ಕೆಲವರು ಗದ್ದೆಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಲ್ಲದೆ ಮಹಿಳೆಯೊಬ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಚಿನ್ನದ ಸರ ಕತ್ತಿನಿಂದ ಜಾರಿದ್ದು ಗಮನಕ್ಕೆ ಬಂದು ನೋಡಿದಾಗ ಮಂಗಳಮುಖಿಯ ವೇಷಧರಿಸಿದಾತ ಚಿನ್ನದ ಸರವನ್ನು ಸೊಂಟದ ಚೀಲಕ್ಕೆ ಹಾಕುವುದನ್ನು ನೋಡಿ ತಕ್ಷಣ ಆಕೆಯನ್ನು ಹಿಡಿದು ಇತರ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿನ್ನದ ಸರದ ವಾರಿಸುದಾರರು ದೂರು ನೀಡಲು ರಾತ್ರಿ ಪೊಲೀಸರಲ್ಲಿ ಮಾತನಾಡಿದಾಗ ಬೆಳಿಗ್ಗೆ ಬರಲು ತಿಳಿಸಿದ್ದರು. ಹಾಗೆ ಎ.18 ರ ಬೆಳಿಗ್ಗೆ ಚಿನ್ನದ ಸರದ ವಾರಿಸುದಾರರಾದ ಮಹಿಳೆ ಮತ್ತು ಮಹಿಳೆಯ ತಂದೆ ಠಾಣೆಗೆ ಹೋದಾಗ ಹಿಡಿದು ಕೊಟ್ಟ ಕಳ್ಳನನ್ನು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ನಕಲಿ ಮಂಗಳಮುಖಿಯನ್ನು ಠಾಣೆಗೆ ಕರೆದೊಯ್ಡು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಟ್ಟಿರುವ ಕುರಿತು ಕೃತ್ಯಕ್ಕೆ ಒಳಗಾದವರು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗೆ ಪೋನ್ ಮೂಲಕ ಮಹಿಳೆಯ ತಂದೆ ಪೊಲೀಸರ ನಡವಳಿಕೆ ಕುರಿತು ದೂರು ನೀಡಿದ್ದಾರೆಂದು ತಿಳಿದು ಬಂದಿದೆ