ಶಿವಮೊಗ್ಗ: ಹರ್ಷ ಕೊಲೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ಎನ್ ಐಎ ತನಿಖೆಗೆ ವಹಿಸಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಸುಪರ್ದಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವೆ, ಶಿವಮೊಗ್ಗ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಎನ್ ಐಎ ಯು ನಂಬಿಕಸ್ಥ ಏಜೆನ್ಸಿಯಾಗಿದ್ದು, ಎನ್ಐಎ ತನಿಖೆಗೊಪ್ಪಿಸಿದರೆ ಹರ್ಷ ಕುಟುಂಬಸ್ಥರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಗೃಹ ಇಲಾಖೆಯು ಈ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಿದೆ. ಹಾಗೂ ನಿನ್ನೆ ಸಂಜೆ ಎನ್ಐಎ ಅಧಿಕಾರಿಗಳು ಶಿವಮೊಗ್ಗ ಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ.
ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷನ ಮೇಲೆ ದುಷ್ಕರ್ಮಿಗಳು ಫೆಬ್ರವರಿ 20 ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ನಡೆಸಿದ್ದರು. ಆರೋಪಿಗಳ ಶೀಘ್ರ ಪತ್ತೆಗಾಗಿ ಹಿಂದೂಪರ ಸಂಘಟನೆಗಳು, ಜನಸಾಮಾನ್ಯರು ಒತ್ತಾಯಿಸಿದ್ದರು. ಅಲ್ಲದೆ, ಹರ್ಷ ಕೊಲೆ ಹಿನ್ನೆಲೆಯಲ್ಲಿ ಶಿವಮೊಗ್ಗ ಬಂದ್ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು.