ಮಂಡ್ಯ: ಒಕ್ಕಲಿಗ ಹುಡುಗಿಯರಿಗಾಗಿ ಒಕ್ಕಲಿಗ ಹುಡುಗರು ಕ್ಯೂ ನಿಂತು ಟ್ರಾಫಿಕ್ ಜಾಮ್ ಉಂಟಾದ ಘಟನೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದಿದೆ.
ನಿನ್ನೆ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು- ವರ ಸಮಾವೇಶದಲ್ಲಿ ಈ ಘಟನೆ ಸಂಭವಿಸಿದೆ.
ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರು ಇದ್ದರೆ 10 ಸಾವಿರಕ್ಕೂ ಹೆಚ್ಚಿನ ಹುಡುಗರು ಅರ್ಜಿ ಸಲ್ಲಿಸಿದ್ದರು.
ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತು ಹೊಡೆದಿದ್ದು, ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತು ಅವರ ಪೋಷಕರು ಕ್ಯೂ ನಿಲ್ಲಬೇಕಾಯಿತು.
ವಧು-ವರರ ಸಮಾವೇಶಕ್ಕೆಂದು ಬಂದಿದ್ದ ಭಾರೀ ಸಂಖ್ಯೆಯ ಜನರಿಂದಾಗಿ ಆದಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.
ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ವಧು-ವರರ ಸಮಾವೇಶವನ್ನು ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ ಮತ್ತು ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.