ಉಳ್ಳಾಲ: ತೊಕ್ಕೊಟ್ಟು ಫೈ ಓವರ್ ಅಡಿಯಲ್ಲಿ ಮಾರುತಿ 800 ಕಾರೊಂದನ್ನ ತಡೆದ ಮಂಗಳೂರು ದಕ್ಷಿಣ ಸಂಚಾರಿ ಲಸ್ರಾದೊ ಅವರು ಕಾರಿನಲ್ಲಿ ಅಂಟಿಸಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ, ಟೀಂ ಪರಶುರಾಮ್ ಸ್ಟಿಕರ್ ಗಳನ್ನು ತೆಗೆಯುವಂತೆ ಹೇಳಿದ್ದಾರೆ.ಇದನ್ನು ವಿರೋಧಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಇಂದು ನಡೆದಿದೆ.
ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಎಸೈ ರಾಬರ್ಟ್ ಲಸ್ರಾದೊ ಬಬೀಶ್ ಪೂಜಾರಿಯವರಿಗೆ ಸೇರಿದ ಮಾರುತಿ ಕಾರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಖಲೆಗಳೆಲ್ಲಾ ಸರಿಯಾಗಿದ್ದು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿ ಕೊರಗಜ್ಜ ಟೀಂ ಪರಶುರಾಮ್ ಎಂಬ ಸ್ಟಿಕ್ಕರ್ ಗಳನ್ನ ಕಳಚಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.
ತಕ್ಷಣ ಕಾರು ಚಾಲಕ ಬಬೀಶ್ ಪೂಜಾರಿಯವರು ಬಜರಂಗದಳ ಸಂಘಟನಾ ಪ್ರಮುಖರು ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರಲ್ಲಿ ತಮಗಾದ ಘಟನೆಯನ್ನು ವಿವರಿಸಿದ್ದಾರೆ.ಸ್ಥಳಕ್ಕಾಗಮಿಸಿದ ಚಂದ್ರಹಾಸ ಪಂಡಿತ್ ಹೌಸ್ ಅವರಲ್ಲೂ ಎಎಸ್ ಐ ಲಸ್ರಾದೊ ಅವರು ಉಡಾಫೆಯಿಂದ ಮಾತನಾಡಿದ್ದು, ಇದರಿಂದ ಕೆರಳಿದ ಹಿಂದೂ ಸಂಘಟನೆ ಸದಸ್ಯರು ಕೂಡಲೇ ಜಮಾಯಿಸಿ ಪ್ರತಿಭಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದಕ್ಷಿಣ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ದು, ಲಸ್ರಾದೊ ಅವರು ಕರ್ತವ್ಯದಲ್ಲಿದ್ದಾಗಲೇ ಕೋಮು ಭಾವನೆಯನ್ನು ತೋರಿಸಿದ್ದು, ಅವರನ್ನು ಈ ಕೂಡಲೇ ವಜಾಗೊಳಿಸುವಂತೆ ಚಂದ್ರಹಾಸ ಪಂಡಿತ್ ಹೌಸ್ ಅವರು ಇನ್ಸ್ ಪೆಕ್ಟರ್ ಗುರುದತ್ ಕಾಮತ್ ಅವರಲ್ಲಿ ಒತ್ತಾಯಿಸಿದ್ದಾರೆ. ಇಂತಹ ಲಜ್ಜೆಗೆಟ್ಟ ಅಧಿಕಾರಿಗಳು ಪ್ರಾಮಾಣಿಕ ಪೊಲೀಸರ ಮರ್ಯಾದಿ ಹರಾಜು ಮಾಡುವ ಕಾರ್ಯ ನಡೆಸುತ್ತಿದ್ದಾರೆ. ಇಂಥವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಟ್ರಾಫಿಕ್ ಎಎಸೈ ಲಸ್ರಾದೊ ವಾಹನ ಸವಾರರಿಗೆ ವಿನಾಕಾರಣ ಪೀಡನೆ ನೀಡುತ್ತಿರುವ ಅನೇಕ ದೂರುಗಳು ಕೇಳಿ ಬಂದಿವೆ. ದಾಖಲೆಗಳು ಸಮರ್ಪಕವಾಗಿದ್ದರೂ ವಾಹನದ ಹಳೆಯ ಕೇಸುಗಳ ದಂಡವನ್ನ ಸ್ಥಳದಲ್ಲೇ ಪಾವತಿಸುವಂತೆ ವಾಹನ ಸವಾರರನ್ನು ಪೀಡಿಸುವುದು, ತಪ್ಪಿದಲ್ಲಿ ವಾಹನ ಜಪ್ತಿ ಮಾಡಲು ಮುಂದಾಗುವ ದೂರುಗಳು ಕೇಳಿ ಬಂದಿವೆ. ಮೇಲಧಿಕಾರಿಗಳು ಇಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.