ಉಡುಪಿ: ಇಂದು ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಸಂಜೆ 4ಕ್ಕೆ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಬಿ ಸುಣಗಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮೀನುಗಾರರ ತಳ ಮಟ್ಟದ ಸಮಸ್ಯೆಯನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅವರು ಆಗಮಿಸುತ್ತಿದ್ದಾರೆ. ಮೀನುಗಾರರ ಸಮಸ್ಯೆಯ ಪೈಕಿ ಒಂದಾದ ಅಳ ಸಮುದ್ರ ಸೇರಿದಂತೆ ಇತರೆ ಸಣ್ಣ ಪುಟ್ಟ ಬೋಟ್ಗಳಿಗೆ ಸರಿಯಾದ ಡೀಸೆಲ್ ವ್ಯವಸ್ಥೆ ಇಲ್ಲದಂತಾಗಿದೆ. ಮುಖ್ಯ ಮಂತ್ರಿಯವರು ಮಂಗಳೂರಿಗೆ ಪದೇ ಪದೇ ಬಂದರೂ ಕೂಡ ಮೀನುಗಾರರ ಡೀಸೆಲ್ ಸಮಸ್ಯೆಯನ್ನು ಇನ್ನೂ ಬಗೆಹರಿಸಲಿಲ್ಲ. ಕಾಂಗ್ರೆಸ್ ಸರಕಾರ ರಚನೆಯಾದ 6 ತಿಂಗಳಿನಲ್ಲಿ ಮೀನುಗಾರರಿಗೆ ಬಂಪರ್ ಯೋಜನೆಗಳು ಜಾರಿಗೊಳ್ಳಲಿದೆ. ಮೀನುಗಾರರ ಮನೆ ನಿರ್ಮಾಣಕ್ಕೆ ಸರಕಾರ ಕೇವಲ 1.25 ಲಕ್ಷ ನಿಗಧಿಪಡಿಸಿದ್ದು, ಈ ಮೊತ್ತದಿಂದ ಸುಸಜ್ಜಿತ ಮನೆ ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕಾಂಗ್ರೆಸ್ ಮುಖಂಡರು ಸೇರಿ ತೀರ್ಮಾನಿಸಿ, ಸರಕಾರ ರಚನೆಯಾದ ತಕ್ಷಣ ಮನೆ ನಿರ್ಮಾಣ ವೆಚ್ಚ 3 ಲಕ್ಷಕ್ಕೆ ಹೆಚ್ಚಿಸುವ ಯೋಜನೆಯನ್ನು ಕೈಗೊಂಡಿದ್ದು, ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.