ಬಂಟ್ವಾಳ : ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಸದ್ಯ ಕಡಿಮೆಯಾಗಲು ಆರಂಭವಾಗಿದ್ದು, ಮುಂದೆ ಮಳೆಯಾಗದಿದ್ದರೆ ನಗರಕ್ಕೆ ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಈಗಿನ ಮಾಹಿತಿ ಪ್ರಕಾರ ಡ್ಯಾಂನಲ್ಲಿ ನೀರಿನ ಒಳಹರಿವು ಮುಂದಿನ 10 ದಿನದವರೆಗೆ ಮಾತ್ರ ಇರಬಹುದು. ಬಳಿಕ ಡ್ಯಾಂನ ಎಲ್ಲ ಗೇಟ್ಗಳನ್ನು ಹಾಕಿ 6 ಮೀ. ನೀರು ನಿಲುಗಡೆ ಮಾಡಲಾಗುತ್ತದೆ. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿ.ಕ್ಯು.ಮೀ. ನೀರು ದಾಸ್ತಾನು ಆಗಿ ನಗರಕ್ಕೆ 55 ದಿನ ಪೂರೈಕೆ ಮಾಡಬಹುದು. ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಆವಿಯಾಗುವ ಪ್ರಮಾಣವೂ ಏರಿಕೆಯಾಗಿದೆ.
ಎಪ್ರಿಲ್-ಮೇ ವೇಳೆ ಸುಬ್ರಹ್ಮಣ್ಯ-ಧರ್ಮಸ್ಥಳ ಸಹಿತ ಇತರ ಭಾಗಗಳಲ್ಲಿ ಮಳೆಯಾದರೆ ನೇತ್ರಾವತಿಯಲ್ಲಿ ನೀರು ಏರಿಕೆಯಾಗಿ ತುಂಬೆ ಡ್ಯಾಂನ ನೀರಿನ ಮಟ್ಟ ನಿರ್ವಹಿಸಲು ಸಾಧ್ಯವಾಗಬಹುದು. ಮಳೆಯಾಗದಿದ್ದರೆ ಇರುವ ನೀರನ್ನು ರೇಷನಿಂಗ್ ಮೂಲಕ ನೀಡಬೇಕಾದ ಅನಿವಾರ್ಯವಿದೆ.
ನೀರಿನ ಸಮರ್ಪಕ ಬಳಕೆ ಹಿನ್ನೆಲೆಯಲ್ಲಿ ಈಗಾಗಲೇ ಎಂಎಸ್ಇಝಡ್, ಎಂಸಿಎಫ್, ಎಎಂಆರ್ ಡ್ಯಾಂ, ಮೆಸ್ಕಾಂ, ಪಾಲಿಕೆ ಅಧಿಕಾರಿಗಳು ಹಾಗೂ ಸುಯೇಜ್ ಸಂಸ್ಥೆಯವರ ಜತೆಗೆ ಮೊದಲ ಹಂತದ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಒಳಹರಿವು ಸಂಪೂರ್ಣ ನಿಂತ ಅನಂತರ ಜಿಲ್ಲಾಡಳಿತದಿಂದ ಮತ್ತೂಂದು ಸುತ್ತಿನ ಸಭೆ ನಡೆಯಲಿದ್ದು, ನೀರು ರೇಷನಿಂಗ್ ಬಗ್ಗೆ ತೀರ್ಮಾನವಾಗಲಿದೆ.
ಈ ಬಾರಿ ನೀರು ಬಳಕೆ ಪ್ರಮಾಣ ಏರಿಕೆ 2020, 2021ರ ವರ್ಷ ಪ್ರಾರಂಭದ ವೇಳೆ ಕೊರೊನಾ ಕಾರಣದಿಂದ ಲಾಕ್ಡೌನ್ ನಗರದಲ್ಲಿ ಜಾರಿಯಲ್ಲಿತ್ತು. ಹೀಗಾಗಿ ನೀರಿನ ಬಳಕೆ ಬಹುತೇಕ ಕಡಿಮೆ ಇತ್ತು. ಕೈಗಾರಿಕೆ, ಹೊಟೇಲ್, ಅಂಗಡಿ, ಸಭಾಂಗಣ ಸಹಿತ ವಿವಿಧ ಕಡೆಗಳಲ್ಲಿ ನೀರಿನ ಬಳಕೆ ಬಹುತೇಕ ಕಡಿಮೆ ಇತ್ತು. ಆದರೆ ಈ ಬಾರಿ ನೀರಿನ ಬಳಕೆ ಹೆಚ್ಚಾಗಿದೆ. ನಗರದಲ್ಲಿ ಎಲ್ಲ ವ್ಯವಹಾರ ಚಟುವಟಿಕೆಗಳು ನಡೆಯುತ್ತಿರುವ ಕಾರಣದಿಂದ ನೀರಿನ ಬಳಕೆ ಅಧಿಕವಾಗಿದೆ. ಸಮರ್ಪಕ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳು ಪಾಲಿಕೆಗೆ ಬಹು ಸವಾಲಿದ್ದಾಗಿವೆ.