ಬೆಂಗಳೂರು: ಉಕ್ರೇನ್ ನಿಂದ ವಾಪಸ್ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸಭೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಉತ್ತರಿಸಿದ ಸಚಿವ ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಂಡ ಸಭೆ ನಡೆಸಿದ್ದು ಇದರ ಬಗ್ಗೆ ಶೀಘ್ರದಲ್ಲೇ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ನೀಟ್ ಬಗ್ಗೆ ಯಾವ ರಾಜ್ಯಗಳಿಗೂ ಹಿಡಿತವಿಲ್ಲ, ಆಲ್ ಇಂಡಿಯಾ ಕೌನ್ಸಿಲ್ ಅದನ್ನು ನಿರ್ವಹಣೆ ಮಾಡುತ್ತದೆ, ೫೦% ರಾಜ್ಯಕ್ಕೆ, ೫೦% ಕೇಂದ್ರಕ್ಕೆ ಸೀಟು ಹಂಚಿಕೆಯಾಗುತ್ತದೆ, ನೀಟ್ ಕಷ್ಟ ಅನ್ನುವ ಕಾರಣಕ್ಕೆ ನೀಟ್ ತರಬೇತಿಯನ್ನು ತಾಲೂಕು ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಶೂನ್ಯ ವೇಳೆಯಲ್ಲಿ ಉಕ್ರೇನ್ ನಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರ ಪ್ರಸ್ತಾಪ ಮಾಡಿದ ವಿಪಕ್ಷ ಉಪನಾಯಕ ಯು.ಟಿ. ಖಾದರ್, ನೀಟ್ ಪ್ರವೇಶ ಕೊಡುವಾಗ ಪಿಯುಸಿ ಮತ್ತು ನೀಟ್ ಅಂಕದಲ್ಲಿ ೫೦% ಅವಕಾಶ ಕೊಡಿ, ಇಲ್ಲವಾದರೆ ಮಕ್ಕಳಿಗೆ ವಂಚನೆಯಾಗುತ್ತದೆ, ಮಕ್ಕಳು ಬೇರೆ ಬೇರೆ ಕಡೆ ಹೋಗಬೇಕಾದ ಅನಿವಾರ್ಯತೆ ಆಗುತ್ತದೆ ಎಂದು ಪ್ರಸ್ತಾಪ ಮಾಡಿದ್ದರು.