ಮಂಗಳೂರು: ಕರಾವಳಿಯಲ್ಲಿ ಇಂದು ಕೇಂದ್ರ ಸಚಿವರಿಂದ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಯಲಿದೆ. ವಿವಿಧ ಸಮಾವೇಶ, ಸಭೆಗಳಲ್ಲಿ ಮೂವರು ಸಚಿವರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ವಿದೇಶಾಂಗ ಇಲಾಖೆ ಸಚಿವ ಎಸ್. ಜೈಶಂಕರ್ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಂಗ್ರಹದ ಭಾಗವಾಗಿ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಸಭೆ ನಡೆಯಲಿದೆ.
ಕೇಂದ್ರ ಪಶು ಸಂಗೋಪನೆ, ಡೈರಿ ಮತ್ತು ಮೀನಗಾರಿಕಾ ಇಲಾಖೆ ರಾಜ್ಯ ಸಚಿವ ಪರ್ಷೋತ್ತಮ ರೂಪಾಲಾ ಉಡುಪಿ ಜಿಲ್ಲೆಯ ಮಲ್ಪೆ ಹಾರ್ಬರ್ ನಲ್ಲಿ ಮತ್ತು ಉಚ್ಚಿಲದಲ್ಲಿ ಮೀನುಗಾರರ ಜೊತೆ ಸಂವಾದ ನಡೆಸಲಿದ್ದಾರೆ. ನಂತರ ಮೂಡುಬಿದಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಬಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಪ್ರವಾಸೋದ್ಯಮ, ಬಂದರು ಮತ್ತು ಜಲಸಾರಿಗೆ ಇಲಾಖೆ ರಾಜ್ಯ ಸಚಿವ ಶ್ರೀಪಾದ ಯಶೋ ನಾಯ್ಕ್ ಸುಳ್ಯ ತಾಲೂಕಿನ ಪಂಜದಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ನಂತರ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಚುನಾವಣಾ ಪ್ರಣಾಳಿಕೆ ಸಭೆ ಮತ್ತು ಉದ್ಯಮಿಗಳ ಜೊತೆ ಸಂವಾದ ನಡೆಸಲಿದ್ದಾರೆ.