ಉಡುಪಿ; ಬಸ್ ನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಯುವಕರನ್ನು ಬಂಧಿಸಲಾಗಿದೆ.
ಕುಂದಾಪುರಕ್ಕೆ ಹೊರಟ ಖಾಸಗಿ ಬಸ್ಸಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ಯುವಕರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೀರ್ತಿ, ನವೀತ್ ಮತ್ತು ಸಚೀತ್ ಬಂಧಿತರು.
ಉಡುಪಿಯಿಂದ ಕುಂದಾಪುರಕ್ಕೆ ಹೊರಟ ಬಸ್ಸಿನಲ್ಲಿ ನಾಲ್ವರು ಯುವತಿಯರು ಬಸ್ ಹತ್ತಿದ್ದರು.ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮೂವರು ಯುವಕರು ಉಡುಪಿಯಲ್ಲಿ ಹತ್ತಿದ್ದರು. ಬಸ್ ಉಡುಪಿ ಬಿಟ್ಟ ನಂತರ ಯುವಕರು ಪುಂಡಾಟ ಶುರುಮಾಡಿದ್ದಾರೆ. ಯುವತಿಯರ ಜಡೆ ಎಳೆದು, ಮೈ ಕೈಮುಟ್ಟುತ್ತ ಕಿರುಕುಳ ನೀಡಲು ಶುರು ಮಾಡಿದ್ದರು. ಬಸ್ನಲ್ಲಿ ಕಡಿಮೆ ಪ್ರಯಾಣಿಕರು ಇದ್ದ ಕಾರಣ ಭಯಗೊಂಡ ಯುವತಿಯರು ಸಂತೆಕಟ್ಟೆಯಲ್ಲಿ ಬಸ್ ನಿಂದ ಇಳಿದಿದ್ದಾರೆ.
ಸಂತೆಕಟ್ಟೆಯಲ್ಲಿ ಮತ್ತೊಂದು ಬಸ್ ಏರಿ ಯುವತಿಯರು ಪ್ರಯಾಣ ಮುಂದುವರಿಸಿ, ಬಸ್ ನಿರ್ವಾಹಕನಿಗೆ ತಮಗಾದ ಕಿರುಕುಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿಯರು ಪ್ರಯಾಣಿಸುತ್ತಿದ್ದ ಬಸ್ ಕಂಡಕ್ಟರ್ ಕುಂದಾಪುರ ಬಸ್ ಏಜೆಂಟರಿಗೆ ವಿಷಯ ಮುಟ್ಟಿಸಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ಸಿಗುವಂತೆ ಮಾಡಿದ್ದು,ಪೊಲೀಸರು ಯುವಕರನ್ನು ಬಂಧಿಸಿದ್ದಾರೆ