ಉಡುಪಿ: ಕಾಲೇಜಿನ ತರಗತಿಗೆ ಹಾಜರಾಗಲು ಬಯಸುವವರು ಹಿಜಾಬ್ ತೆಗೆದು ಬನ್ನಿ. ಹಿಜಾಬ್ ಹಾಕದೇ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಆವರಣದೊಳಗೂ ಬರಬೇಡಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಸೋಮವಾರ ಕಾಲೇಜು ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಪೋಷಕರು, ಉಪನ್ಯಾಸಕರ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಷಯಕ್ಕೆ ಸಂಬಂಧಿಸಿ ಮೊನ್ನೆ ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರನ್ನೊಳಗೊಂಡಿರುವ ಸಮಿತಿ, ಉಪನ್ಯಾಸಕರ ಸಭೆ ಮಾಡಿದ್ದೇವೆ. ಹಿಜಾಬ್ ಬೇಕೆನ್ನುವ ನಾಲ್ವರು ವಿದ್ಯಾರ್ಥಿನಿಯರು, ಅವರ ಪೋಷಕರನ್ನು ಕರೆದಿದ್ದೇವೆ. ನಾವು ವಿವರವಾಗಿ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ಹಿಜಾಬ್ಗೆ ಅವಕಾಶ ಕೊಡುವುದಕ್ಕೆ ಆಗಲ್ಲ. ಸರಕಾರ ಯಾವ ನಿರ್ಧಾರ ಮಾಡುತ್ತದೋ ಸಮಿತಿ ನಿರ್ಧಾರ ತನಕವೂ ಕಾಯಬೇಕು. ಕಾಂಪೌಂಡ್ ಆವರಣದವರೆಗೆ ಹಿಜಾಬ್ ಹಾಕಿಕೊಂಡು ಬಂದು ಕ್ಲಾಸ್ರೂಮ್ನಲ್ಲಿ ಹಿಜಾಬ್ ತೆಗೆದು ಹಾಜರಾಗಬೇಕು ಎಂದರು.
ಕಾಲೇಜು ಆವರಣದೊಳಗೆ ನಿಮ್ಮ ನಿರ್ಧಾರ ಮಾಡುವಂತಿಲ್ಲ. ನಮ್ಮ ನಿರ್ಧಾರ ಆಗಿದೆ. ಇಲ್ಲಿಗೆ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳು ಮಾಡಬಾರದೆಂದು ಹೇಳಿದ್ದೇವೆ. ಪೊಲೀಸ್ ಇಲಾಖೆಗೂ ತಿಳಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರುತ್ತದೆ. ಈ ಸಮಸ್ಯೆಗಳನ್ನು ಬೇಗನೆ ಪರಿಹರಿಸಿ ಇದರಿಂದ ಉಳಿದ ಮಕ್ಕಳಿಗೆ ಓದುವುದಕ್ಕೆ ಸಮಸ್ಯೆಯಗುತ್ತಿದೆ ಮಕ್ಕಳ ಪೋಷಕರು ದೂರುತ್ತಿದ್ದಾರೆ ಎಂದು ಶಾಸಕರು ಹೇಳಿದರು.


