ಮಡಿಕೇರಿ: ಮನೆಯಲ್ಲಿ ಕಳ್ಳತನವಾದರೆ ಎಲ್ಲರೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ಆದರೆ ಕೊಡಗಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಎಸ್ಪಿ ಕಚೇರಿಯ ಟಪಾಲು ಖಜಾನೆಯಿಂದ ಭರ್ತಿ 16.96 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಪೊಲೀಸ್ ಧ್ವಜ ಮಾರಾಟದಿಂದ ಬಂದ 3.85, 650 ರೂ, ವಿರಾಜಪೇಟೆ ಉಪ ವಿಭಾಗದ 3,82,800 ರೂ, ಹಾಗೂ ಕೋವಿಡ್ ಉಲ್ಲಂಘಿಸಿದವರಿಂದ ಸಂಗ್ರಹವಾಗಿದ್ದ 9.28 ಲಕ್ಷ ರೂ. ಹಣವನ್ನು ದೋಚಿದ್ದಾರೆ.
ಜಿಲ್ಲಾ ಪೊಲೀಸ್ ಶಾಖೆಯಲ್ಲಿ ನಗದು ನಿರ್ವಾಹಕರಾಗಿರುವ ಟಿ.ಎ.ರಂಜಿತ್ ಎಂಬುವರು ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಅಜಿತ್ ನಂಜಪ್ಪಾಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಿಬ್ಬಂದಿ ವಿನೋದ್ ಕುಮಾರ್ ಎಂಬುವರ ವಿರುದ್ಧ ಅನುಮಾನವಿರೋದಾಗಿ ತಿಳಿಸಿದ್ದಾರೆ.
ವಿನೋದ್ ಅವರ ಜೀವನ ಶೈಲಿ ಕಳೆದ ಕೆಲವು ದಿನಗಳಿಂದ ಐಶಾರಾಮಿಯಾಗಿದ್ದು, ಇವರೇ ಕದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಈ ಹಣವನ್ನ ವಾರದೊಳಗೆ ಮರು ಸಂದಾಯ ಮಾಡದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಕ್ಷಮಾ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ. ರಂಜಿತ್ ಜುಲೈ 2 ರಂದು ದೂರು ನೀಡಿದ್ದು, ಮೇ ತಿಂಗಳಲ್ಲೇ ಹಣ ಕಳವಾಗಿರುವ ಶಂಕೆ ವ್ಯಕ್ತವಾಗಿದೆ.