ಮಂಗಳೂರು: ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತೀ ಆರು ವಾರ್ಡ್ ಗೊಂದು ತಂಡ ರಚನೆ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ.
ನಗರದ ವ್ಯಾಪ್ತಿ ಜು. 1ರಿಂದ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧ ಹೇರಿ ಮಹಾನಗರ ಪಾಲಿಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕಾರ್ಯಾಚರಣೆ ನಡೆ ಸಲು ಪ್ರತೀ ಆರು ವಾರ್ಡ್ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗಿದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತ, ಮಲೇರಿಯಾ ಮೇಲ್ವಿಚಾರಕರು, ಕಂದಾಯ ಅಧಿಕಾರಿ ಸಹಿತ ಒಂದು ತಂಡದಲ್ಲಿ ಐದು ಮಂದಿ ಅಧಿಕಾರಿಗಳು ಇರಲಿದ್ದಾರೆ.
ಈ ತಂಡವು ನಗರದ ವಿವಿಧ ಭಾಗಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿ ಮಾಲಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ. ಒಂದು ವೇಳೆ ಬಳಕೆ ಮಾಡಿದರೆ ದಂಡ ಪ್ರಯೋಗದ ಜತೆ ಪ್ಲಾಸ್ಟಿಕ್ಗಳನ್ನು ವಶಪಡಿಸಿ ಕೊಳ್ಳಲು ನಿರ್ಧರಿಸಿದೆ. ಬಳಕೆ ಪುನರಾವರ್ತನೆಯಾದರೆ ದುಬಾರಿ ದಂಡದ ಜತೆಗೆ ಪರವಾನಿಗೆ ರದ್ದುಗೊಳಿಸಲು ನಿರ್ಧಾರವನ್ನೂ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಈ ತಂಡದಿಂದ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಶನಿವಾರ ಕಾವೂರು, ಪಡೀಲು, ಬಿಜೈ, ಕಾಪಿಕಾಡ್ ಮುಂತಾದ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡು ತ್ತಿದ್ದ ಅಂಗಡಿಗಳ ಮೇಲೆ ಕಾರ್ಯಾ ಚರಣೆ ನಡೆಸಿದೆ. ಒಟ್ಟು 25 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ 3,600 ರೂ. ದಂಡ ವಿಧಿಸಿದ್ದಾರೆ.
ಸರಕಾರದ ಆದೇಶವನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆವತಿಯಿಂದ ಎಲ್ಲ ಅಂಗಡಿ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದ್ದೇವೆ. ವಿವಿಧ ಪ್ರದೇಶದಲ್ಲಿ ಮಳಿಗೆಗಳಿಗೆ ತೆರಳಿ ಪರಿಶೀಲಿಸಿದ್ದೇವೆ. ಪ್ರಥಮ ಬಾರಿ ಉಲ್ಲಂಘನೆ ನಡೆಸಿದವರಿಗೆ 200 ರೂ.ದಂಡ ವಿಧಿಸಿ ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತಪ್ಪು ಪುನರಾವರ್ತನೆ ಆದಲ್ಲಿ ಗರಿಷ್ಠ 20 ಸಾ.ರೂ ದಂಡ, ಅಂಗಡಿ ಪರವಾನಿಗೆ ರದ್ದಾಗುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರು ಇದೀಗ ಲಭ್ಯ ಇರುವ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೆಂದು ಪಾಲಿಕೆ ಪರಿಸರ ಅಭಿಯಂತ ಸುಶಾಂತ್ ತಿಳಿಸಿದ್ದಾರೆ.