ದಕ್ಷಿಣ ಕನ್ನಡದ ಹೊಳೆ, ತೊರೆಗಳಲ್ಲಿ ಕಂಡುಬರುವ ಮಡೆಂಜಿ ಮೀನಿಗೆ ಬೇಡಿಕೆ ಇದೆ. ಅದರಲ್ಲಿ ಔಷಧೀಯ ಗುಣವೂ ಇದೆ ಎಂದು ಸಚಿವ ಅಂಗಾರ ಹೇಳಿದ್ದಾರೆ. ಪೈಲ್ಸ್ (ಮೂಲವ್ಯಾಧಿ)ಗೆ ಮಡೆಂಜಿ ಮೀನಿನ ಗಂಜಿ ಉತ್ತಮ ಔಷಧ ಎಂದು ಸಚಿವರು ವಿವರಿಸಿದರು.
ಪೈಲ್ಸ್ ಸಮಸ್ಯೆಗೆ ತುತ್ತಾದಾಗ ನನ್ನ ಅಜ್ಜಿ ಮಡೆಂಜಿ ಮೀನಿನ ಗಂಜಿ ನೀಡಿದ್ದರು. ಮಡೆಂಜಿ ಮೀನನ್ನು ಹಿಡಿದು ತಂದು ನೆಲದ ಮೇಲೆ ಬೆಳ್ತಿಗೆ ಅಕ್ಕಿಯ ಮೇಲೆ ಬಿಡಬೇಕು. ಸಾಕಷ್ಟು ಹೊತ್ತು ಪ್ರಾಣ ಸಂಕಟದಿಂದ ಅಕ್ಕಿಯ ಮೇಲೆ ಹೊರಳಾಡಿ ಮೀನು ಸಾಯುತ್ತದೆ. ಬಳಿಕ ಮೀನಿನ ಮೇಲೆ ಅಂಟಿಕೊಂಡ ಅಕ್ಕಿಯನ್ನು ತೆಗೆದು ಗಂಜಿ ಮಾಡಿ ಉಪ್ಪು, ಅರಿಶಿನ ಸೇರಿಸಿ ಸೇವಿಸಬೇಕು. ಈ ರೀತಿ ಒಂದಷ್ಟು ಸಮಯ ನನಗೆ ಅಜ್ಜಿ ಮಾಡಿಕೊಟ್ಟಿದ್ದರು. ಆಮೇಲೆ ಮತ್ತೆಂದೂ ಆ ಸಮಸ್ಯೆ ನನಗೆ ಕಾಡಿಲ್ಲ ಎಂದರು.
ಆರ್ಥಿಕ ಅಭಿವೃದ್ಧಿ ಮತ್ತು ಆಹಾರ ಸ್ವಾವಲಂಬನೆ ದೃಷ್ಟಿಯಿಂದ ಒಳನಾಡು ಮೀನುಗಾರಿಕೆಗೆ ದೊಡ್ಡ ಮಟ್ಟದ ಉತ್ತೇಜನವನ್ನು ಸರಕಾರ ನೀಡುತ್ತಿದೆ. ಜತೆಯಲ್ಲೇ ಮತ್ಸ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಎಸ್. ಅಂಗಾರ ಹೇಳಿದರು.