ತೆಕ್ಕಟ್ಟೆ: ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಮೀಪ ನಿಂತಿದ್ದ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿಯಾಗಿ ಜಖಂಗೊಂಡ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಮಹಾರಾಷ್ಟ್ರದಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಲಾರಿಯು ರಸ್ತೆ ಬದಿಯಲ್ಲಿ ಟಯರ್ ಪಂಕ್ಟರ್ ಆಗಿ ಕೆಟ್ಟು ನಿಂತಿದ್ದ ವಾಹನಕ್ಕೆ ಬಂದು ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಲಾರಿ ಚಾಲಕನಿಗೆ ಗಾಯಗಳಾಗಿವೆ.
ಮಹಾರಾಷ್ಟ್ರದಿಂದ ಲೋಡ್ ಹೊತ್ತು ತರುತ್ತಿದ್ದ ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಅದೇ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು, ಲಾರಿ ಚಾಲಕ ಕುಂದಾಪುರದ ಕೆಲವೆಡೆಗಳಲ್ಲಿ ಬ್ಯಾರಿಕೇಡ್ ಹಾಗೂ ಡಿವೈಡರ್ಗೆ ವಾಹನವನ್ನು ತಾಗಿಸಿ ಎರ್ರಾಬಿರಿ ವಾಹನ ಚಲಾಯಿಸುತ್ತಿರುವುದನ್ನು ನೋಡಿದ್ದಾರೆ. ಸಂಚಾರ ಪೊಲೀಸ್ ಪಿಎಸ್ಐ ಸುಧಾ ಪ್ರಭು, ಎಎಸ್ಐ ಜನಾರ್ದನ್, ಸಿಬ್ಬಂದಿ ರಾಘವೇಂದ್ರ, ಶಶಿಧರ್, ವಿಶ್ವನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.