ಮುಲ್ಕಿ: ಹಳೆಯಂಗಡಿ ಸಮೀಪದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದಲ್ಲಿ ಎ. 13 ರಿಂದ 19 ರವರೆಗೆ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಮೇಷ ಸಂಕ್ರಮಣದ ದಿನವಾದ ಇಂದು ತಂತ್ರಿಗಳಾದ ಯಾಜಿ ದಿವಾಕರ ಭಟ್ ನೇತೃತ್ವದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಶ್ರೀದೇವರ ಧ್ವಜಾರೋಹಣ ಹಾಗೂ ಸಂಜೆ ಶ್ರೀ ದೇವರ ಹಳೆಯಂಗಡಿ ಪೇಟೆ ಸವಾರಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಧರ್ಮದರ್ಶಿ ಯಾಜಿ ನಿರಂಜನ ಭಟ್, ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ವಿದ್ಯಾಶಂಕರ್, ಪ್ರೇಮಲತಾ ಯೋಗೀಶ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಎ.17 ಭಾನುವಾರ ದೇವಸ್ಥಾನದಲ್ಲಿ ಬೆಳಿಗ್ಗೆ 10: 22ಕ್ಕೆ ಶ್ರೀ ವರಪ್ರದ ಗಣಪತಿ ಪ್ರತಿಷ್ಠೆ, ಲಕ್ಷ ಮೋದಕ ಗಣಹೋಮ, ರಂಗಪೂಜೆ, ಸಂಜೆ ಬಾಕಿಮಾರು ದೀಪ, ಕೆರೆ ದೀಪ, ಎ.18 ಸೋಮವಾರ 10: 30ಕ್ಕೆ ಶ್ರೀದೇವರ ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾ ರಥೋತ್ಸವ, ಶಯನೋತ್ಸವ ನಡೆಯಲಿದೆ.