ದೆಹಲಿಯ ಗ್ರೇಟರ್ ನೋಯ್ಡಾದ ನವಾಡ ನಿವಾಸಿಯೋರ್ವ ತನ್ನ ಮದುವೆ ಕಾರ್ಡ್ ಹಂಚಲು ಹೋಗುತ್ತಿದ್ದ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲೇ ಸುಟ್ಟು ಕರಕಲಾಗಿರುವ ಘಟನೆ ಶನಿವಾರ (ಜ.18ರಂದು) ರಾತ್ರಿ ದೆಹಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಅನಿಲ್ ಎಂದು ಗುರುತಿಸಲಾಗಿದೆ. ಅನಿಲ್ ಅವರ ವಿವಾಹ ಫೆಬ್ರವರಿ 14 ರಂದು ನಿಗದಿಯಾಗಿತ್ತು. ಶನಿವಾರ ಮಧ್ಯಾಹ್ನ ಅನಿಲ್ ತನ್ನ ಲಗ್ನ ಪತ್ರಿಕೆಯನ್ನು ವಿತರಿಸಲು ಮನೆಯಿಂದ ತೆರಳಿದ್ದರು. ತಡರಾತ್ರಿಯವರೆಗೆ ಹಿಂತಿರುಗದಿದ್ದಾಗ, ನಾವು ಅವನಿಗೆ ಕರೆ ಮಾಡಲು ಪ್ರಯತ್ನಿಸಿದೆವು ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. 11-11:30 ರ ಸುಮಾರಿಗೆ ಕಾರು ಅಪಘಾತವಾಗಿ ಅನಿಲ್ ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿ ತಿಳಿಸಿದ್ದಾರೆ ಎಂದು ಅನಿಲ್ ಅವರ ಹಿರಿಯ ಸಹೋದರ ಸುಮಿತ್ ಹೇಳಿದ್ದಾರೆ.
ಅನಿಲ್ ಅವರು ವ್ಯಾಗನ್ ಆರ್ ಕಾರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಈ ಪರಿಣಾಮ ಅನಿಲ್ ಕಾರಿನೊಳಗೆಯೇ ಸುಟ್ಟು ಕರಕಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯ ಬಗ್ಗೆ ಇನ್ನು ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.