ವಿಜಯನಗರ : 2023 ರ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ. ಇದರ ಮೊದಲ ಭಾಗ ಎನ್ನುವಂತೆ ನೂತನ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿಗೆ ಭರದ ಸಿದ್ಧತೆ ನಡೆದಿದೆ. ಇದೇ ತಿಂಗಳ 16 ಮತ್ತು 17 ರಂದು ನಡೆಯಲಿರೋ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದು, ಹೊಸಪೇಟೆಯಲ್ಲಿ ಎರಡು ದಿನ ಬಿಜೆಪಿ ಹಬ್ಬದ ವಾತವರಣವೇ ಸೃಷ್ಟಿ ಮಾಡಿದೆ..
ಹೌದು, 2023 ಚುನಾವಣೆಗೆ ಬಿಜೆಪಿಯ ಈ ಕಾರ್ಯಕಾರಣಿ ದಿಕ್ಸೂಚಿ ಎಂದೇ ಬಿಂಬಿಸಲಾಗ್ತಿದೆ. ಏಪ್ರಿಲ್ 16 ಹಾಗೂ 17 ರಂದು ನಡೆಯಲಿರೋ ಕಾರ್ಯಕಾರಿಣಿಗೆ ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಹವಾನಿಯಂತ್ರಿತ ಜರ್ಮನ್ ಟೆಂಟ್ ನಿರ್ಮಿಸಲಾಗುತ್ತಿದ್ದು, ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೂ ವೇದಿಕೆಯ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್ಡ್ರಾಪ್ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪದ ಸ್ಮಾರಕಗಳು ಗೋಚರಿಸಲಿವೆ. ಈ ಶಿಲ್ಪಗಳ ಮಧ್ಯೆ ಕಮಲದ ಚಿಹ್ನೆ ಕಂಗೊಳಿಸಲಿದೆ. ಅದ್ದೂರಿ ಸೆಟ್ ನಿರ್ಮಾಣ ಕಾರ್ಯ ಒಂದು ಕಡೆಯಾದ್ರೆ ಹೊಸಪೇಟೆ ನಗರದಲ್ಲಿ ಅದಕ್ಕಾಗಿ ಸಕಲ ತಯಾರಿ ನಡೆದಿದ್ದು, ಎಲ್ಲೆಲ್ಲೋ ಕೇಸರಿ ಧ್ವಜ, ಬಿಜೆಪಿ ಬಾವುಟ ರಾರಾಜಿಸುತ್ತಿವೆ. ಇದನ್ನೆಲ್ಲಾ ನೋಡ್ತಿದ್ರೆ ರಾಜ್ಯ ಬಿಜೆಪಿ ನಾಯಕರು ಮುಂದಿನ ವರ್ಷ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ರಣಕಹಳೆ ಮೊಳಗಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ..
ಸಚಿವ ಆನಂದ ಸಿಂಗ್ ಅವರಿಗೆ ಕಾರ್ಯಕಾರಣಿ ಸಂಪೂರ್ಣ ಉಸ್ತುವಾರಿ ನೀಡಲಾಗಿದೆ.. ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ, ಸಚಿವ ಆನಂದ್ ಸಿಂಗ್, ಬಿಜೆಪಿ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ನಿತ್ಯ ಸಿದ್ದತೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ರಾಜ್ಯಧ್ಯಕ್ಷ ಕಟೀಲ್, ಮುಖ್ಯಮಂತ್ರಿ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 650 ಪ್ರಮುಖ ನಾಯಕರು ಕಾರ್ಯಕಾರಣಿಯಲ್ಲಿ ಭಾಗಿಯಾಗಲಿದ್ದಾರೆ.
ಇತ್ತೀಚೆಗೆ ಸಂಪುಟ ವಿಸ್ತರಣೆ ಕುರಿತು ಎದ್ದಿರೋ ಮಾತುಗಳಿಗೂ ಇಲ್ಲಿ ಉತ್ತರ ದೊರಕಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಕೆ.ಎಸ್ .ಈಶ್ವರಪ್ಪ ಅವರ ಮೇಲೆ ಕೇಳಿಬಂದಿರೋ ಕಮಿಷನ್ ಆರೋಪದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿರುವ ಹೈಕಮಾಂಡ್ ಕಾರ್ಯಕಾರಿಣಿಯಲ್ಲಿ ಯಾವುದಾದರೂ ನಿರ್ಧಾರ ಕೈಗೊಳ್ಳಲಿದೆಯಾ ಎನ್ನುವ ಪ್ರಶ್ನೆಯೂ ಎದ್ದಿದೆ. ಕಾರ್ಯಕ್ರಮದ ಕುರಿತು ಮಾತನಾಡಿರೋ ಸಚಿವ ಆನಂದ್ ಸಿಂಗ್, ಸಭೆಗೆ ಆಗಮಿಸೋ ಎಲ್ಲಾ ಗಣ್ಯರಿಗೂ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ ಎಂದಿದ್ದಾರೆ.