ಬೆಂಗಳೂರು: ಖಾಸಗಿ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್’ ಹಾಗೂ ಕಿರುತೆರೆ ಧಾರವಾಹಿಯ ‘ನಾಗಿಣಿ’ಯ ಮೂಲಕ ಪ್ರಸಿದ್ಧಿಯನ್ನು ಪಡೆದ ನಟಿ ದೀಪಿಕಾ ದಾಸ್ ಅವರಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಯುವಕನೋರ್ವ ನಟಿಯ ಬಗ್ಗೆ ಅಪಪ್ರಚಾರ ಮಾಡಿ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿ ದೀಪಿಕಾ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತಿಚೆಗಷ್ಟೇ ದೀಪಿಕಾ ದಾಸ್ ಉದ್ಯಮಿ ದೀಪಕ್ ಕುಮಾರ್ ಎಂಬುವರೊಟ್ಟಿಗೆ ವಿವಾಹವಾಗಿದ್ದರು. ಆದರೆ ಇದೀಗ ಯಶವಂತ್ ಎನ್ನುವ ಯುವಕನೋರ್ವ ದೀಪಿಕಾ ದಾಸ್ ಮತ್ತು ಅವರ ಪತಿ ವಿರುದ್ಧ ಅಪಪ್ರಚಾರ ಮಾಡಿದ್ದಾನೆ ಎನ್ನಲಾಗಿದೆ.
ಯುವಕನು ನಟಿಯ ತಾಯಿ ಪದ್ಮಲತಾ ಅವರಿಗೆ ಕರೆ ಮಾಡಿ ದೀಪಕ್ ಕುರಿತು, ಆತ ಮೋಸಗಾರ. ಅಷ್ಟೇ ಅಲ್ಲದೆ ಆತ ಬಹಳಷ್ಟು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಇದರಿಂದಲೇ ಆತ ಬಡಾವಣೆ ಮಾಡಿಕೊಂಡಿದ್ದು, ಹಲವು ಭಾರೀ ಜೈಲಿಗೂ ಹೋಗಿದ್ದಾನೆ. ಅವನ ಜೊತೆ ನಿವ್ಯಾಕೆ ನಿಮ್ಮ ಮಗಳಿಗೆ ಮದುವೆ ಮಾಡಿದ್ದೀರಿ ಎಂದಿದ್ದಾನೆ,’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಇತ್ತ ಕಡೆ ಯಶವಂತ್ ದೀಪಿಕಾ ದಾಸ್ ಗೆ ಕರೆ ಮಾಡಿ, ‘ನಾನು ಕೇಳಿದಷ್ಟು ಹಣವನ್ನು ಕೊಡದೇ ಇದ್ದರೆ ನಿಮ್ಮ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಷ್ಟೇಅಲ್ಲದೆ ಈತ ಕಳೆದ ಏಳು ತಿಂಗಳಿನಿಂದಲೂ ನಟಿ ಹಾಗೂ ಅವರ ಗಂಡನಿಗೆ ಸಂಬಂಧಿಸಿದ ಹಲವು ವ್ಯಕ್ತಿಗಳಿಗೆ ಕರೆ ಮಾಡಿ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ನಟಿಯ ತಾಯಿ ದೂರಿದ್ದಾರೆ.
ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಸೆರೆಗೆ ತನಿಖೆ ಆರಂಭಿಸಿದ್ದಾರೆ.
ಸದ್ಯಕ್ಕೆ ನಟಿ ದೀಪಿಕಾ ದಾಸ್ ಹಾಗೂ ಅವರ ಪತಿ ದೀಪಕ್ ಕುಮಾರ್ ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ.