ಮಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ನವದೆಹಲಿಯಲ್ಲಿ ಆಯೋಜಿಸಿದ್ದ 59ನೇ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತನ್ಮಯ್ ಎಂ ಕೊಟ್ಟಾರಿ ಎರಡು ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ತನ್ಮಯ್ ಇಲ್ಲಿನ ದೇರೆಬೈಲ್ ನ ಪ್ರಶಾಂತ್ ನಗರದ ನಿವಾಸಿಗಳಾದ ಮೋಹನ್ ಕೊಟ್ಟಾರಿ ಮತ್ತು ಸುನೀತಾ ಮೋಹನ್ ದಂಪತಿಯ ಪುತ್ರ. ನಗರದ ಕೆನರಾ ಸಿಬಿಎಸ್ಇ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ.
ಮೂರೂವರೆ ವರ್ಷ ವಯಸ್ಸಿನಲ್ಲೇ ತನ್ಮಯ್ ರೋಲರ್ ಸ್ಕೇಟಿಂಗ್ ಕಡೆಗೆ ಒಲವು ತೋರಿದ್ದರು. ಇದುವರೆಗೆ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಸ್ಪರ್ಧೆಗಳಲ್ಲಿ 75ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಸತತ ಆರು ಬಾರಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಜೊತೆಗೆ ಎರಡು ಬಾರಿ ದಸರಾ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿದ್ದಾರೆ.
ತನ್ಮಯ್ ಅವರು ಮೇ 2017 ರಲ್ಲಿ ಪಾಂಡಿಚೇರಿಯಲ್ಲಿ ನಡೆದ ಅಖಿಲ ಭಾರತ ಓಪನ್ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು ಹಾಗೇ ಇವರನ್ನು ‘ರಾಷ್ಟ್ರೀಯ ಚಾಂಪಿಯನ್’ ಎಂದು ಘೋಷಿಸಲಾಗಿತ್ತು.
ತನ್ಮಯ್ ಇದುವರೆಗೆ ರಾಷ್ಟ್ರಮಟ್ಟದಲ್ಲಿ ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಪದಕ, ರಾಜ್ಯ ಮಟ್ಟದಲ್ಲಿ 16 ಪದಕ ಹಾಗೂ ದಕ್ಷಿಣ ವಲಯದ ಸ್ಪರ್ಧೆಗಳಲ್ಲಿ 12 ಪದಕಗಳನ್ನು ಗೆದ್ದಿದ್ದಾರೆ.
ಮೋಹನ್ ದಾಸ್ ಕೆ ನಗರದ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನಲ್ಲಿ ತನ್ಮಯ್ ತರಬೇತಿಯನ್ನು ಪಡೆಯುತ್ತಿದ್ದಾರೆ.