ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣಾರ ಮೊಮ್ಮಗ (ದಿ. ಸಿದ್ದಾರ್ಥ್ ಪುತ್ರ) ಅಮಾತ್ಯ ಹಾಗೂ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಈ ಹಿಂದೆಯೆ ಬಂದಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹಾಗೂ ಎಸ್ಎಂಕೆ ಅಳಿಯ ದಿ. ಸಿದ್ದಾರ್ಥ ಅವರ ಪುತ್ರ ಅಮಾತ್ಯ ವಿವಾಹಕ್ಕೆ ಮುನ್ನುಡಿಯಾಗಿ ಹುಡುಗನನ್ನು ನೋಡುವ (ತಾಂಬೂಲ) ಶಾಸ್ತ್ರವನ್ನು ಡಿಕೆಶಿ ಕುಟುಂಬ ಮಾಡಿದೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಕುಟುಂಬ ಭೇಟಿ ನೀಡಿತ್ತು. ಬೀಗತನದಿಂದ ಮಾಜಿ ಸಿಎಂ ಎಸ್ಎಂಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿ ಸಂಭ್ರಮ ಮೂಡಿದೆ.
ಕಾಂಗ್ರೆಸ್ ಪಕ್ಷವನ್ನು ಎಸ್.ಎಂ. ಕೃಷ್ಣ ಅವರು ತೊರೆದ ಮೇಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಸ್ಎಂಕೆ ಸಂಪರ್ಕ ಕಡಿದುಕೊಂಡಿರಲಿಲ್ಲ. ಎಸ್ಎಂಕೆ ಅಳಿಯ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಎಸ್ಎಂಕೆ ಅವರಿಗೆ ಧೈರ್ಯ ತುಂಬಿದ್ದು ಇದೇ ಡಿಕೆಶಿ. ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ಎರಡು ರಾಜಕೀಯ ಕುಟುಂಬಗಳು ನೆಂಟಸ್ತನ ಬೆಳೆಸಿವೆ