ಉಡುಪಿ ನಗರದ ಪಿಪಿಸಿ ಕ್ರಾಸ್ ಬಳಿ ಯುವಕನ ಮೇಲೆ ತಲ್ವಾರ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಯಲ್ಲಾಪುರದಲ್ಲಿ ಆರೋಪಿಗಳಾದ ಅಕ್ಷತ್ ಪೈ (27), ಕುಂಜಿಬೆಟ್ಟು, ಉಡುಪಿ ಸುಶಾಂತ್ (25), ಶಿವಳ್ಳಿ ಗ್ರಾಮ, ಉಡುಪಿ ರಮಾನಂದ ಪೈ (42), ಡಯಾನಾ ಟಾಕೀಸ್ ಹಿಂಭಾಗ, ಉಡುಪಿ ಸಂತೋಷ್ ಕೊರಗ (38), ಅಮ್ಮುಂಜೆಗುಡ್ಡೆ, ಉಪ್ಪೂರು ಶಶಾಂಕ್ ನಾಯಕ್ (25) ಬಂಧಿತರು.
ದಿನಾಂಕ 30-01-2026ರಂದು ರಾತ್ರಿ ಸುಮಾರು 9 ಗಂಟೆಗೆ ಚಿಟ್ಪಾಡಿ ಬೈಲೂರು 76 ಬಡಗುಬೆಟ್ಟು ನಿವಾಸಿ,ಶರತ್ ಕುಂದರ್ (25), ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಮಣಿಪಾಲದ ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲೀಕರ ಮಗನೊಂದಿಗೆ ಕೈ ತಾಗಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು.
ಗಲಾಟೆಯ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ಅಕ್ಷತ್ ಪೈ ಅವರು ಕರೆ ಮಾಡಿ ಹೋಟೆಲ್ನಲ್ಲಿ ನಡೆದ ವಿಚಾರ ಕುರಿತು ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾರೆ. ಅದರಂತೆ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಮತ್ತು ರೋಹಿತ್ ಜೊತೆ ಪಿಪಿಸಿ ಕ್ರಾಸ್ ಬಳಿ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ರಾತ್ರಿ ಸುಮಾರು 11:30 ಗಂಟೆಗೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ಟಾಟಾ ಸಫಾರಿ ವಾಹನದಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಹಾಗೂ ಇತರರು ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಮೇಲೆ ಹಲ್ಲೆ ನಡೆಸಿ ಕೊಲ್ಲುವ ಉದ್ದೇಶದಿಂದ ತಲೆಗೆ ಬೀಸಿದ್ದಾರೆ. ಕೈಗಳನ್ನು ಮುಂದಕ್ಕೆ ಚಾಚಿದ ಪರಿಣಾಮ ಬಲ ಅಂಗೈ, ಮಧ್ಯದ ಬೆರಳು, ಎಡಕೈ ಮಣಿಗಂಟಿನ ಒಳಭಾಗ ಹಾಗೂ ಕಿರು ಬೆರಳಿಗೆ ಗಾಯಗಳಾಗಿವೆ. ಗಾಯಗೊಂಡ ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2026ರಡಿ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿ ದಿನಾಂಕ 13-02-2026ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಅಂದಾಜು 8 ಲಕ್ಷ ರೂ. ಮೌಲ್ಯದ ಹುಂಡೈ ವೆನ್ಯೂ ಕಾರು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


