ನವದೆಹಲಿ, ಮೇ 26: ಮಹಾಮಾರಿ ಕೊರೋನಾದಿಂದ ದೇಶವೇ ನಲುಗಿ ಹೋಗಿರುವ ಈ ಸಂಕಷ್ಟದ ಸಮಯದಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಆಹಾರ ಬೆಳೆಗಳ ಮೇಲೆ ಮಿಡತೆ ದಾಳಿ ನಡೆಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಮಿಡತೆ ಹಾವಳಿ ಹೆಚ್ಚಾಗಿದೆ. ಕೋಟ್ಯಂತರ ಸಂಖ್ಯೆಯಲ್ಲಿ ಬಂದು , ಹಸಿರು ಹೊಲಗಳಲ್ಲಿನ ಬೆಳೆಯನ್ನು ತಿಂದುಹೋಗುವ ಮರುಭೂಮಿ ಮಿಡತೆಗಳ ಗುಂಪು ಹಲವೆಡೆ ಲಗ್ಗೆ ಇಟ್ಟಿದೆ.

ಮಿಡತೆಗಳು ರಾಜಸ್ಥಾನದ ಮೂಲಕ ಮಧ್ಯಪ್ರದೇಶ ನೀಮುಚ್ ಜಿಲ್ಲೆಯನ್ನು ಪ್ರವೇಶಿಸಿವೆ. ಮಿಡತೆಗಳು ಮಾಲ್ವಾ ಜಿಲ್ಲೆ ದಾಟಿ , ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನತ್ತ ಲಗ್ಗೆ ಇಟ್ಟಿವೆ. ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಧ್ಯ ಪ್ರದೇಶದ 15 ಜಿಲ್ಲೆಗಳ ವಿವಿಧ ಗ್ರಾಮಗಳ ಮೇಲೆ ದಾಳಿ ಮಾಡಿದ್ದ ಲಕ್ಷಾಂತರ ಮಿಡತೆಗಳಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಳೆದ ಮೂರು ದಿನಗಳಿಂದ ಈ ಜಿಲ್ಲೆಗಳ ಗ್ರಾಮಗಳ ಮೇಲೆ ಮರುಭೂಮಿ ಮಿಡತೆ ಜಾತಿಯ ಲಕ್ಷಾಂತರ ಗಿಡಗಳು ಏಕಕಾಲದಲ್ಲಿ ದಾಳಿ ಮಾಡಿದೆ. ಕೀಟ ನಾಶಕ ಸಿಂಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪೂರ್ವ ಆಫ್ರಿಕಾ, ಇರಾನ್ ಮತ್ತು ಪಾಕಿಸ್ತಾನದಲ್ಲಿ ಮರುಭೂಮಿ ಮಿಡತೆಗಳ ದೊಡ್ಡ ಗುಂಪುಗಳು ರೂಪುಗೊಳ್ಳುತ್ತವೆ. ಮೇ ಅಂತ್ಯದ ವೇಳೆಗೆ ಇವು ಭಾರತವನ್ನು ಪ್ರವೇಶಿಸಬಹುದು. ಇವುಗಳನ್ನು ನಿಯಂತ್ರಿಸಲು ಸಂಬಂಧಿತ ಎಲ್ಲಾ ದೇಶಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ಹೇಳಿತ್ತು. ಭಾರತ ಸರ್ಕಾರ ಇರಾನ್ ಹಾಗೂ ಪಾಕಿಸ್ತಾನಕ್ಕೆ ಪತ್ರ ಬರೆದಿತ್ತು. ಆದರೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.