ಮಂಗಳೂರು: ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವವುಳಿಸಲು ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿ ಆತನ ರಕ್ಷಣೆಗೆ ಶತಾಯಗತಾಯ ಪ್ರಯತ್ನಪಟ್ಟ ಗೂಡಿನಬಳಿಯ 6 ಮಂದಿ ಯುವಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ನಿಶಾಂತ್ ಎಂಬ ಯುವಕನನ್ನು ರಕ್ಷಿಸಿದ ಗೂಡಿನಬಳಿಯ ಈಜುಪಟುಗಳಾದ ಶಮೀರ್, ಮುಕ್ತಾರ್, ಮುಹಮ್ಮದ್, ತೌಸೀಫ್, ಝಾಹಿದ್, ಆರಿಫ್ ಅವರಿಗೆ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಿಥುನ್ ರೈ, ದಕ್ಷಿಣ ಕನ್ನಡ ಜಿಲ್ಲೆ ಯಾವತ್ತೂ ಶಾಂತಿ-ಸೌಹಾರ್ದತೆಯ ನಾಡು. ಆದರೆ ಓಟಿನ ಲಾಭಕ್ಕಾಗಿ ಜಾತಿ ವಿಷಬೀಜ ಬಿತ್ತಿ ಶಾಂತಿ ಕದಡುವವರು ಇದ್ದಾರೆ. ಆದರೆ ಈದ್-ಉಲ್-ಫಿತ್ರ್ ಅಂದು ಬಂಟ್ವಾಳದ ಗೂಡಿನಬಳಿಯಲ್ಲಿ ನಡೆದ ಘಟನೆ ನಿಜಕ್ಕೂ ಸೌಹರ್ದತೆಯ ಸಂಕೇತ. ಯುವಕರು ಮಾಡಿದ ಸಾಧನೆ ಮೂಲಕ ಸೌಹಾರ್ದತೆ, ಏಕತೆಗೆ ಮಾದರಿಯಾಗಿ ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭೋದಯ ಆಳ್ವ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸುಹೈಲ್ ಕಂದಕ್, ಕಾರ್ಪೊರೇಟರ್ ಅನಿಲ್ ಕುಮಾರ್,ಪ್ರಧಾನ ಕಾರ್ಯದರ್ಶಿಗಳಾದ ಸುಹೈಬ್ ಬಾವ ಸುರತ್ಕಲ್ ,ಅನ್ಸಾರ್ ಸಾಲ್ಮರ ,ನಾಸಿರ್ ಸಾಮನಿಗೆ , ಸೌಹಾನ್ ಎಸ್ ,ಕೆ .ಬಂಟ್ವಾಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಮುನ್ನಾ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.