ಬಂಟ್ವಾಳ: ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್ ವಿ ಎಸ್ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈಯನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಆತನಿಗೆ ಬೆಂಬಲ ನೀಡುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಬಂಟ್ವಾಳದ ಎಸ್ ವಿಎಸ್ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಇತ್ತೀಚೆಗೆ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದರು.
ಜಾಮೀನಿನಲ್ಲಿ ಬಿಡುಗಡೆಯಾಗಿರುವ ಆ ವ್ಯಕ್ತಿ ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಕರೆದು ಪ್ರಾಂಶುಪಾಲರು ಬೆದರಿಸುತ್ತಿದ್ದಾರೆ. ಪೊಲೀಸ್ ದೂರು ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ದೂರಿದ್ದಾರೆ.ಎಫ್.ಐ.ಆರ್ ದಾಖಲಾಗಿರುವ ಕಾಲೇಜು ಸಂಚಾಲಕ ಪ್ರಕಾಶ್ ಶೆಣೈ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಲೇಜಿನಲ್ಲಿ ಓದುವ ಮಕ್ಕಳಿಗೆ ರಕ್ಷಣೆ ಇಲ್ಲ. ಮಹಿಳಾ ಉಪನ್ಯಾಸಕರಿಗೆ ಈ ಬಗ್ಗೆ ಆಕ್ರೋಶ ಹೊಂದಿದ್ದರೂ ಮಾತನಾಡಲು ಧೈರ್ಯ ತೋರುತ್ತಿಲ್ಲ. ಹೀಗಾಗಿ ತಾರತಮ್ಯ ತೋರುವ ಪ್ರಾಂಶುಪಾಲರು ನಮಗೆ ಬೇಡ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಬಂಟ್ವಾಳ ಶಾಸಕರು ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬುವರ ಬಗ್ಗೆ ಕೆಟ್ಟದಾಗಿ ಬರೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಎಸ್ ವಿಎಸ್ ಕಾಲೇಜಿನ ಸಂಚಾಲಕ ಮತ್ತು ಇಬ್ಬರು ಉಪನ್ಯಾಸಕರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದರೂ, ಕಾಲೇಜಿನಲ್ಲಿ ಉಳಿದುಕೊಂಡು ವಿರೋಧ ಮಾಡುವ ವಿದ್ಯಾರ್ಥಿಗಳ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ. ವಿರೋಧ ಮಾಡಿದರೆ ಟಿಸಿ ಕೊಟ್ಟು ಕಳಿಸ್ತೇವೆಂದು ಬೆದರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ


