ಸುಂಟಿಕೊಪ್ಪ: ಕಾರ್ಮಿಕನೋರ್ವ ತನ್ನ ಮೇಲೆ ಕಾಡಾನೆ ದಾಳಿ ಮಾಡಿದ ಸಂದರ್ಭ ಚರಂಡಿಯೊಳಗೆ ಬಿದ್ದು ಪ್ರಾಣ ಉಳಿಸಿಕೊಂಡಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪ ವ್ಯಾಪ್ತಿಯ ಹೊರೂರು ಗ್ರೀನ್ ಲ್ಯಾಂಡ್(ಎ) ತೋಟದಲ್ಲಿ ನಡೆದಿದೆ.
ಸಂಜೆ 5.30ರ ಸಮಯದಲ್ಲಿ ಕಾರ್ಮಿಕ ಸುಬ್ರಾಯ (55) ಎಂಬುವವರು ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ದಿಡೀರಾಗಿ ಕಾಡಾನೆಯೊಂದು ಎದುರಾಗಿದೆ. ಮಳೆಯಿದ್ದ ಕಾರಣ ಕೊಡೆ ಹಿಡಿದಿದ್ದ ಸುಬ್ರಾಯರವರಿಗೆ ತೋಟದ ನಡುವೆ ಮದಗಜನ ಇರುವಿಕೆ ಅರಿವಿಗೆ ಬಂದಿರಲಿಲ್ಲ. ಹೀಗಾಗಿ ಏಕಾಏಕಿ ಕಾಡಾನೆ ಸುಬ್ರಾಯರವರ ಮೇಲೆ ಎರಗಿದೆ.
ಇದರಿಂದ ಹಾದಿ ಬದಿಯ ಚರಂಡಿಯೊಳಗೆ ಬಿದ್ದಿದ್ದಾರೆ.ಆದರೆ ಅದೃಷ್ಟವಶಾತ್ ಚರಂಡಿಯೊಳಗೆ ಕಾಲಿಡಲಾಗದ ಕಾಡಾನೆ ಕಾರ್ಮಿಕನನ್ನು ತುಳಿಯಲಾಗದೇ ತನ್ನ ಪಾಡಿಗೆ ಹೊರಟು ಹೋಗಿದೆ. ಸುಬ್ರಾಯರವರು ಚರಂಡಿಯೊಳಗೆ ಬೀಳದಿದ್ದಲ್ಲಿ ಕಾಡಾನೆ ತುಳಿದು ಸಾಯಿಸುತ್ತಿತ್ತು ಎಂದು ಘಟನೆ ನಡೆದ ಜಾಗದ ಸನಿಹ ಎತ್ತರ ಪ್ರದೇಶದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿನ್ನೆ ದಿನ ಹೊರೂರು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚಾರಣೆಯನ್ನು ಕೈಗೊಳ್ಳಲಾಗಿತ್ತು. ಇದರಿಂದ ಓಡಿ ಬಂದಿರುವ ಈ ಆನೆ ಕಾರ್ಮಿಕನ ಮೇಲೆ ಎರಗಿರಬಹುದೆಂದು ಶಂಕಿಸಲಾಗಿದೆ. ಆದರೆ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಬಗ್ಗೆ ಸೂಕ್ತವಾದ ಮಾಹಿತಿ ನೀಡದ ಕಾರಣ ಕಾರ್ಮಿಕರು ಎಂದಿನಂತೆ ತೋಟಕ್ಕೆ ಕೆಲಸಕ್ಕೆ ತೆರಳಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.