ಸುಳ್ಯ: ಪುತ್ತೂರಿನ ಕೋಡಿಂಬಾಡಿಯಲ್ಲಿ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಂದರ ಪಾಟಾಜೆ ಮಹಿಳೆಯರ ಮೇಲೆ ಕೈ ಹಾಕಿದ್ದಲ್ಲದೇ ಅವರಿಂದ ಧರ್ಮದೇಟು ತಿಂದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಈ ಬಗ್ಗೆ ಸ್ವತಃ ಸುಂದರ್ ಪಾಟಾಜೆಯವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನ ಕೋಡಿಂಬಾಡಿ ಗ್ರಾಮದ ಕಜೆ ಎಂಬ ಸ್ಥಳದಲ್ಲಿ ನಿವಾಸಿಯಾದ ಚೋಮು ಎಂಬವರಿಗೂ ಮತ್ತು, ಗಿರಿಯಪ್ಪರಿಗೂ ಜಾಗದ ವಿವಾದವಿದ್ದು, ಚೋಮ ಎಂಬವರ 1.05 ಎಕ್ರೆ ಜಾಗ ದರ್ಖಾಸ್ತು ಆಸ್ತಿಯಾಗಿದ್ದು, ಆರ ಟಿ ಸಿ ಹೊಂದಿದ್ದು, ಇದೇ ಜಾಗದಲ್ಲಿ ಗಿರಿಯಪ್ಪರಿಗೂ 94. ಸಿ ಅಡಿ 5 ಸೆಂಟ್ಸ್ ಜಾಗ ರೆಕಾರ್ಡ್ ಆಗಿತ್ತು.
ಚೋಮ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಅನುಭವಿಸಲು ಅವರ ಸಹೋದರ ಬಿಡದ ಹಿನ್ನಲೆಯಲ್ಲಿ ಚೋಮ ಎಂಬವರು ನಮ್ಮ ಅಂಬೇಡ್ಕರ್ ಸಮಿತಿಗೆ ಮನವಿ ಮಾಡಿದ್ದರು, ಈ ಹಿನ್ನಲೆಯಲ್ಲಿ ನಾವು ಅಲ್ಲಿಯ ಸ್ಥಳಕ್ಕೆ ಹೋಗಿ ಚೋಮು ಎಂಬವರ ಜಾಗದ ಗಡಿ ಗುರುತು ಮಾಡಲು ಸಿದ್ದ ಪಡಿಸಿದಾಗ ಗಿರಿಯಪ್ಪ ರವರು ಮತ್ತು ಅವರ ಮನೆಯವರು ಚೋಮ ಎಂಬವರ ಮಗ ಮತ್ತು ಮಗಳ ಮೇಲೆ ಹಲ್ಲೆ ಮಾಡಲು ಹೋದಾಗ ನಾನು ತಡೆಯಲು ಹೋಗಿದ್ದೆ ಮತ್ತು ಅವರನ್ನು ತಳ್ಳಿದ್ದೆ. ಈ ಸಂದರ್ಭದಲ್ಲಿ ಅವರಲೊಬ್ಬರು ನನ್ನ ಅಂಗಿ ಹಿಡಿದು ಅದು ಹರಿದು ಹೋಗಿತ್ತು. ಇದೇ ಪೋಟೊ ಬಳಸಿ, ವೆಬ್ ನ್ಯೂಸ್ ಗಳಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ, ಪೆಟ್ಟು ತಿಂದು ಓಡಿ ಹೋದ, ಜೈಲಿಗೆ ಹೋಗಿದ್ದಾನೆ, ಹೆಣ್ಣಮಕ್ಕಳ ಮೈ ಮುಟ್ಟಿದ್ದಾನೆ ಎಂಬ ವರದಿಯನ್ನು ಜಾಲತಾಣದಲ್ಲಿ ಬಿತ್ತರ ಮಾಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಸುಂದರ ಪಾಟಾಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ರೀತಿ ಸುಳ್ಳು ಸುದ್ದಿ ಪ್ರಕಟಿಸಿದ ಜಾಲತಾಣದ ವಿರುದ್ದ ನಾನು ಕಾನೂನು ಮೊರೆ ಹೋಗುತ್ತೇನೆ. ದಾರಿಯಲ್ಲಿ ಹೋಗುವವರನ್ನು ಜನ ತಂದಿದ್ದರು ಎಂದಿದ್ದಾರೆ, ಕಾನೂನು ಪ್ರಕಾರ ಕೆಲಸ ಮಾಡುತ್ತಿರುವ ಪೋಲಿಸರ ಮೇಲು ಅಪವಾದ ಮಾಡಿದ್ದಾರೆ. ಈ ಅಪಪ್ರಚಾರ ಮಾಡುವವರು, ಮತ್ತು ನಾನು ಹೆಣ್ಣು ಮಕ್ಕಳ ಮೇಲೆ ಕೈ ಹಾಕಿದ್ದೇನೆ ಎನ್ನುವವರು ಕಾನತ್ತೂರು ಕ್ಷೇತ್ರಕ್ಕೆ ಸತ್ಯಪ್ರಮಾಣಕ್ಕೆ ಬರಲಿ ಎಂದು ಸವಾಲೆಸೆದಿದ್ದಾರೆ.