ಮಂಗಳೂರು: ಪ್ರೀತಿಸಿ, ಮತಾಂತರಗೊಳಿಸಿ ಮದುವೆ ಮಾಡಿಕೊಂಡ ಯುವಕನೊಬ್ಬನಿಂದ ತನಗೆ ಅನ್ಯಾಯವಾಗಿದೆ ಎಂದು ಯುವತಿಯೊಬ್ಬಳು ತನ್ನ ಅಳಲನ್ನು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಮಾಧ್ಯಮದ ಮುಂದೆ ಇಟ್ಟಿದ್ದಾರೆ.
ಘಟನೆ ಹಿಂದೆ ಲವ್ ಜಿಹಾದ್ ಶಂಕೆಯೂ ವ್ಯಕ್ತವಾಗಿದೆ. ಆಸಿಯಾ ಇಬ್ರಾಹಿಂ ಯಾನೆ ಶಾಂತಿ ಜೂಬಿ ಎಂಬವರೇ ತನ್ನ ಪತಿ ಸುಳ್ಯದ ಇಬ್ರಾಹಿಂ ಖಲೀಲ್ ನಿಂದ ಅನ್ಯಾಯಕ್ಕೀಡಾದವರು. ಸದ್ಯ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ
ಕೇರಳದ ಕಣ್ಣೂರಿನ ಪ್ರತಿಷ್ಠಿತ ಹಿಂದೂ ಸಮುದಾಯದ ಯುವತಿ ಶಾಂತಿ ಜೂಬಿ, ಫೇಸ್ಬುಕ್ ನಲ್ಲಿ ಪರಿಚಯವಾದ ಇಬ್ರಾಹಿಂ ಖಲೀಲ್ ಜೊತೆ 2017 ರಲ್ಲಿ ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿದ್ದರು. ಎರಡೂ ಕುಟುಂಬಗಳಿಗೂ ಗೊತ್ತಿಲ್ಲದಂತೆ ಮದುವೆ ನಡೆದಿತ್ತು. ಮದುವೆಗೂ ಮೊದಲೇ ಶಾಂತಿ ಜೂಬಿ, ಇಬ್ರಾಹಿಂ ಖಲೀಲ್ ಒತ್ತಾಯಕ್ಕೆ ಮಣಿದು ಇಸ್ಲಾಂ ಗೆ ಮತಾಂತರಗೊಂಡಿದ್ದರು.
2020 ರ ವರೆಗೆ ಇವರಿಬ್ಬರ ಸಂಸಾರ ಚೆನ್ನಾಗಿಯೇ ಸಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇಬ್ರಾಹಿಂ ಖಲೀಲ್ ಮನೆಯವರಿಗೆ ವಿಷಯ ತಿಳಿದು ಇಬ್ರಾಹಿಂ ಸಹೋದರ ಶಿಹಾಬ್, ಶಾಂತಿ ಜೂಬಿ ಯಾನೆ ಆಸಿಯಾ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದು, ನೀವಿಬ್ಬರು ಜೊತೆಗಿರಕೂಡದು ಎಂದು ಎಚ್ಚರಿಕೆ ನೀಡಿದ್ದಾನೆ. ಆದ್ದರಿಂದ ಕಳೆದ ಕೆಲವು ತಿಂಗಳಿನಿಂದ ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆ, ಧಾರ್ಮಿಕ ಸಂಘಟನೆ ಮೊರೆ ಹೋದರೂ ಪ್ರಯೋಜನವಾಗಿಲ್ಲ.
ಕಳೆದ ಜೂನ್ ತಿಂಗಳಿನಲ್ಲಿ ಆಸಿಯಾ ಇಬ್ರಾಹಿಂ ಯಾನೆ ಶಾಂತಿ ಜೂಬಿ ಸುಳ್ಯಕ್ಕೆ ಆಗಮಿಸಿ ಇಬ್ರಾಹಿಂ ಖಲೀಲ್ ನ ಮನೆಯ ಮುಂದೆ ಪ್ರತಿಭಟಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ನಂತರ ಮುಸ್ಲಿಂ ನಾಯಕರು ಮತ್ತು ಪೋಲೀಸರ ಮಧ್ಯಸ್ಥಿಕೆಯಲ್ಲಿ ಆಸಿಯಾ ಇಬ್ರಾಹಿಂ ಯಾನೆ ಶಾಂತಿ ಜೂಬಿಯನ್ನು ಮನವೊಲಿಸಿ ವಾಪಾಸ್ ಬೆಂಗಳೂರಿಗೆ ಕಳುಹಿಸಲಾಗಿತ್ತು.
ಇನ್ನು ಹಿಂದೂ ಸಂಘಟನೆಗಳು ‘ಘರ್ ವಾಪ್ಸಿ’ ಆದರೆ ನ್ಯಾಯ ಕೊಡಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಮನೆ, ಕುಟುಂಬ ತೊರೆದು ಬಂದಿರುವ ಆಸಿಯಾ ಮರು ಮತಾಂತರಕ್ಕೆ ಮನಸ್ಸು ಮಾಡಿಲ್ಲ. ಬದಲಿಗೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದು, ಸದ್ಯ ಆಧುನಿಕ್ ಹ್ಯೂಮನ್ ರೈಟ್ಸ್ ಕಮಿಟಿ ಮೊರೆ ಹೋಗಿದ್ದಾರೆ.