ಕಾರ್ಕಳ: ಇಲ್ಲಿನ ಮುಂಡ್ಕೂರು ಗ್ರಾಮದ ನಿಟ್ಟಿ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯೋರ್ವ ಮನೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮುಂಡ್ಕೂರು ಗ್ರಾಮದ ಅರದಾಲು ಎಂಬಲ್ಲಿಯ ದೀಪಕ್ ಪೂಜಾರಿ ಎಂಬುವವರ ಪುತ್ರ, ನಿಟ್ಟೆ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಅಭಿಷೇಕ್ (19 ವರ್ಷ) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಅಪರಿಚಿತ ಯುವಕರಿಬ್ಬರು ಅವರನ್ನು ಹುಡುಕಿಕೊಂಡು ಬಂದಿದ್ದು ಹಾಗೂ ಇತರ ಸಂಶಯಗಳಿಂದಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲಕ್ಕೆ ಕೊಂಡೊಯ್ಯಲು ಪೊಲೀಸರು ನಿರ್ದೇಶನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ಎಸ್ ಐ ತೇಜಸ್ವಿ ಹಾಗೂ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಭಿಷೇಕ್ ಅವರು ಕ್ರೀಡೆ ನೃತ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಚುರುಕಾಗಿದ್ದರು. ಅವರು ತಂದೆ, ತಾಯಿ, ಅಣ್ಣ ಹಾಗೂ ತಂಗಿಯನ್ನು ಅಗಲಿದ್ದಾರೆ.