ಉಜಿರೆ: ನಿನ್ನೆ ಸುರಿದ ಮಳೆಗೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆಯಲ್ಲಿ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆಯು ನದಿಯಂತಾಯಿತು.
ಉಜಿರೆಯ ಜನಾರ್ದನ ಶಾಲೆಯ ಮುಂಭಾಗದಿಂದ ಸುಮಾರು 500 ಮೀ. ದೂರದವರೆಗೆ ನೀರು ರಸ್ತೆಯಲ್ಲಿ ಹರಿದ ಕಾರಣ ವಾಹನ ಸವಾರರು, ಪಾದಚಾರಿಗಳು ಯಾತನೆ ಅನುಭವಿಸಿದರು. ರಸ್ತೆ ಪಕ್ಕದಲ್ಲಿರುವ ಅಂಗಡಿ, ಮನೆಗಳ ನಿವಾಸಿಗಳೂ ಸಮಸ್ಯೆ ಎದುರಿಸಿದರು. ಈ ಪ್ರದೇಶ ಸಹಿತ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಚರಂಡಿ ದುರಸ್ತಿ ಕಾಮಗಾರಿ ನಿರ್ವಹಿಸದ ಕಾರಣ ಸಮಸ್ಯೆ ಉಂಟಾಗಿದೆ.
ಚರಂಡಿಗಳಲ್ಲಿ ವಿಪರೀತ ಹೂಳು, ತ್ಯಾಜ್ಯ, ಗಿಡಗಂಟಿಗಳು ತುಂಬಿರುವ ಕಾರಣ ಮಳೆನೀರು ರಸ್ತೆ ಮೂಲಕವೇ ಹರಿಯುತ್ತಿದೆ.ವಿಪರೀತ ವಾಹನ ದಟ್ಟಣೆ ಹಾಗೂ ಅಗಲ ಕಿರಿದಾದ ಈ ರಸ್ತೆ ವಾಹನ ಸವಾರರಿಗೆ ಕಿರಿಕಿರಿ ಹುಟ್ಟಿಸುತ್ತಿದೆ. ಇದರೊಂದಿಗೆ ಈಗ ಮಳೆ ನೀರು ರಸ್ತೆಯಲ್ಲಿ ಹರಿದು ಪರದಾಡುವ ಸ್ಥಿತಿ ಎದುರಾಗಿದೆ.
ಕಳೆದ ವರ್ಷವೂ ಮಳೆಗಾಲದಲ್ಲಿ ಇಲ್ಲಿ ಮಳೆ ನೀರು ಸಾಕಷ್ಟು ಸಮಸ್ಯೆ ನೀಡಿತ್ತು. ಸರಿಯಾಗಿ ಚರಂಡಿ ನಿರ್ವಹಣೆಯಾಗದ ಕಾರಣ ಇಲ್ಲಿನ ಅಂಗಡಿ,ಮನೆಗಳಿಗೆ ನೀರುನುಗ್ಗಿತ್ತು.ಉಜಿರೆ ಪಂಚಾಯಿತಿ ವತಿಯಿಂದ ಅನೇಕ ಬಾರಿ ಕಾಮಗಾರಿ ನಿರ್ವಹಿಸಲಾಗಿದ್ದರೂ ಸಮಸ್ಯೆ ಮತ್ತೆ ಮತ್ತೆ ಉಂಟಾಗುತ್ತಿತ್ತು.ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ವಾಹನ ಸವಾರರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.