ಉಡುಪಿ: ಎಡಿಜಿಪಿ ಅಲೋಕ್ ಕುಮಾರ್ ಉಡುಪಿಗೆ ಭೇಟಿ ನೀಡಿದ್ದು ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ,ಕರ್ನಾಟಕ ಕರಾವಳಿ ಭಾಗ ಸೂಕ್ಷ್ಮಪ್ರದೇಶವಾಗಿದೆ. ಅಧಿಕಾರಿಗಳು ಯಾರಿದ್ದಾರೆ, ಏನೇನು ಪರಿಸ್ಥಿತಿ ಇದೆ ನೋಡಬೇಕು. ಹಿಜಾಬ್ ಪ್ರಕರಣದಿಂದ ಕರಾವಳಿ ಸೂಕ್ಷ್ಮ ಪ್ರದೇಶವಾಗಿದ್ದಲ್ಲ, ಅದಕ್ಕೂ ಹಿಂದಿನಿಂದಲೂ ಕರಾವಳಿ ಸೂಕ್ಷ್ಮ ಪ್ರದೇಶ. ಕಾಲ ಕಾಲಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಬದಲಾಗುತ್ತಿರುತ್ತದೆ ಎಂದು ಹೇಳಿದ್ದಾರೆ.
ಹಿಂದೆ ಅಂಡರ್ ವಲ್ಡ್ ಇತ್ತು ಅದು ಬದಲಾಯಿತು. ಈಗ ಬೇರೆ ಸಮಸ್ಯೆ ಆರಂಭವಾಗಿದೆ.ಪೋಲಿಸರು ಯಾವುದೇ ಸಮಸ್ಯೆ ಎದುರಿಸಲು ಸಮರ್ಥರಾಗಿದ್ದಾರೆ. ಮುಂದೆ ಕೂಡ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಸಮರ್ಥರಿದ್ದಾರೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು , ಆತ್ಮಹತ್ಯೆ ಮಾಡಲು ಉಡುಪಿ ಯಾಕೆ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ.ಚೆಕ್ ಪೋಸ್ಟ್ ಮತ್ತು ವಾಹನ ತಪಾಸಣೆ ಹೆಚ್ಚು ಮಾಡಬೇಕು. ಗೋ ಸಾಗಾಣಿಕೆಗೆ ಕಡಿವಾಣ ಹಾಕುತ್ತೇವೆ. ಕಾನೂನಿನ ಇತಿ ಮಿತಿಯಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ದರಿದ್ದೇವೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ, ಪೋಲಿಸರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಸಂತೋಷ್ ಆತ್ಮಹತ್ಯೆ ಕುರಿತ ತಾಂತ್ರಿಕ ವಿಚಾರಗಳ ತನಿಖೆ ನಡೆಯುತ್ತಿದೆ.ಇನ್ನೂ ಸ್ವಲ್ಪ ಕಾಲಾವಕಾಶ ಬೇಕು. ಸಾಕಷ್ಟು ಗುತ್ತಿಗೆ ಪಡೆದಿದ್ದರು, ಅದರ ಲೆಕ್ಕ ಪರಿಶೋಧನೆಗೆ ಸಮಯ ಹಿಡಿಯುತ್ತದೆ.ತಕ್ಷಣ ತನಿಖೆ ಮುಗಿಯುವುದಿಲ್ಲ. ಅಂತಿಮ ನಿರ್ಣಯಕ್ಕೆ ಬರಲು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ.ಎಫ್ ಎಸ್ ಎಲ್ ವರದಿ ಇನ್ನೂ ಬಂದಿಲ್ಲ ಎಂದು ಹೇಳಿದರು.