ಬೆಂಗಳೂರು: ಇತಿಹಾಸ ಪ್ರಸಿದ್ಧ ಐಹೊಳೆಯ ಸ್ಮಾರಕಗಳ ಸಂರಕ್ಷಣೆ ಕೈಗೊಳ್ಳಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದೆ.
ರಾಜ್ಯ ಪುರಾತತ್ವ ಇಲಾಖೆ, ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಎಸ್ ಡಿಎಂ ಧರ್ಮೋತ್ಥಾನ ಟ್ರಸ್ಟ್ ನಡುವೆ ತ್ರಿಪಕ್ಷೀಯ ಒಡಂಬಡಿಕೆ ನಡೆದಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತ್ರಿಪಕ್ಷೀಯ ಒಡಂಬಡಿಕೆಗೆ ಸಹಿ ಕಾರ್ಯಕ್ರಮ ನಡೆಯಿತು.
ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಡಿ. ಸುರೇಂದ್ರ ಕುಮಾರ್ ಮತ್ತು ಬಾಗಲಕೋಟೆ ಡಿಸಿ ಜಾನಕಿ ಉಪಸ್ಥಿತರಿದ್ದರು.
ಪುರಾತತ್ವ ಇಲಾಖೆ ನಿರ್ದೇಶಕರು, ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಒಡಂಬಡಿಕೆಗೆ ಸಹಿ ಹಾಕಿದರು.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಐಹೊಳೆ ಗ್ರಾಮ ಚಾಲುಕ್ಯ ವಾಸ್ತುಶಿಲ್ಪ ಕಲೆಯನ್ನು ಹೊಂದಿದೆ.