ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಬೈಕ್ ಮತ್ತು ಒಂದು ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರನ್ನು ಹೆಚ್ಚಿನ ತನಿಖೆಗಾಗಿ ಮೂರು ದಿನ ಧರ್ಮಸ್ಥಳ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು. ಇಬ್ಬರು ಅಪ್ರಾಪ್ತ ಬಾಲಕರನ್ನು ನೋಟಿಸ್ ನೀಡಿ ಮನೆಯವರ ಜೊತೆ ಧರ್ಮಸ್ಥಳ ಪೊಲೀಸರು ಕಳುಹಿಸಿದ್ದಾರೆ.
ಬೆಳ್ತಂಗಡಿಯ ಮೂರು ಕಡೆ ತಮ್ಮ ಕೈ ಚಳಕ ತೋರಿಸಿದ್ದ ಕಳ್ಳರು
ಇನ್ನು ಬಂಧನಕ್ಕೆ ಒಳಗಾದ ಈ ತಂಡ ಜಿಲ್ಲೆಯ ಬೇರೆ ಬೇರೆ ಕಡೆ ತಮ್ಮ ಕೈ ಚಳಕ ತೋರಿದೆ. ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಸಂಪ ಮನೆಯ ಅಖಿಲೇಶ್ ಎಂಬವರ KA-21-Y-0967 ನೇ ನೋಂದಣಿ ಸಂಖ್ಯೆಯ YAMAHA ಕಂಪನಿಯ R15 ಮಾದರಿಯ ಮೋಟಾರ್ ಸೈಕಲ್ ಫೆ.14ರಂದು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮದ್ಮಲ್ ಕಟ್ಟೆ ಎಂಬಲ್ಲಿ ಚಿಕ್ಕಮ್ಮನ ಮನೆಯಲ್ಲಿ ನಿಲ್ಲಿಸಿ ಹೋಗಿದ್ದರು. ಫೆ.15 ರಂದು 6 ಗಂಟೆಗೆ ಊರಿಗೆ ವಾಪಾಸ್ಸು ಹೋಗಲು ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಿಂದ ನಾಪತ್ತೆಯಾಗಿತ್ತು. ಬಳಿಕ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಕಳ್ಳತನದ ಹಿಂದೆ ಇದೇ ಗ್ಯಾಂಗ್ ಇರೋದು ತನಿಖೆ ವೇಳೆ ಗೊತ್ತಾಗಿದೆ.
ಅದಲ್ಲದೇ ಬೆಳ್ತಂಗಡಿ ತಾಲೂಕಿನ ಮುಂಡ್ರುಪ್ಪಾಡಿ ನಿವಾಸಿ ಎಮ್ ಬೇಬಿ ಎಂಬವರ CTA6596 ನೇ ನೋಂದಣಿ ಸಂಖ್ಯೆಯ YAMAHA COMPANY RX 100 ಮೋಟಾರ್ ಸೈಕಲ್ ನ್ನು ತಮ್ಮ ಮನೆಯ ಮುಂದುಗಡೆ ಎಂದಿನಂತೆ ಫೆ.14ರಂದು ರಾತ್ರಿ 10:30 ಗಂಟೆಗೆ ನಿಲ್ಲಿಸಿದ್ದು, ಮರುದಿನ ಫೆ.15 ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಎದ್ದು ನೋಡಿದಾಗ ಮನೆಯ ಮುಂದುಗಡೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಸ್ಥಳದಿಂದ ಕಾಣೆಯಾಗಿತ್ತು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇದರ ಹಿಂದೆ ಇದೇ ತಂಡದ ಕೈಚಳಕ ಇರೋದು ಗೊತ್ತಾಗಿದೆ.
ಇನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪೊಳೆ ಮನೆ ನಿವಾಸಿ ಕಿಶೋರ್ ಪುಜಾರಿ ಎಂಬವರು ಫೆ.25 ರಂದು ರಾತ್ರಿ 9 ಗಂಟೆಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಲು ತನ್ನ ಗೆಳೆಯನ ಬಾಬು KA-20-ME-1456 ನೇ ನೋಂದಣೆ ಸಂಖ್ಯೆಯ ಬಿಳಿ ಬಣ್ಣದ ಮಾರುತಿ 800 ಕಾರು ಕಾರನ್ನು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕುಸುಮ ಚಿಕನ್ ಸೆಂಟರ್ ಬಳಿ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮಾ.01 ರಂದು ಬೆಳಿಗ್ಗೆ ಸಮಯ 4 ಗಂಟೆಗೆ ವಾಪಾಸು ಬಂದು ತನ್ನ ಮನೆಗೆ ಹೋಗಲೆಂದು ಕಾರು ನಿಲ್ಲಿಸಿದ್ದ ಸ್ಥಳಕ್ಕೆ ನೋಡಿದಾಗ ಕಾರು ಮಾಯವಾಗಿತ್ತು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನೊಂದು ಬೈಕ್ ಮಾಲೀಕನಿಗೆ ಕಳ್ಳತನವಾದ ಬಗ್ಗೆ ಆರೋಪಿಗಳು ಬಂಧನವಾದ ಬಳಿಕ ತಡವಾಗಿ ಬೆಳಕಿಗೆ ಬಂದಿದ್ದು ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಎಲ್ಲಾ ಪ್ರಕರಣಗಳ ಹಿಂದೆ ಈ ತಂಡದ ಕೈಚಳಕವಿರೋದು ತನಿಖೆಯಿಂದ ಗೊತ್ತಾಗಿದೆ.
ಬಂಧಿತ ಆರೋಪಿಗಳ ವಿವಿರ: ಹಾಸನ ಜಿಲ್ಲೆಯ ಹೊಸಲೈನ್ ರಸ್ತೆಯ ಡಬ್ಬಲ್ ಟ್ಯಾಂಕ್ ಹಿಂಭಾಗದ ದಿನೇಶ್.ಕೆ.ಎಸ್ ಎಂಬವರ ಮಗ ನಂದನ ಗೌಡ ಕೆ.ಡಿ(21) , ಹಾಸನ ಜಿಲ್ಲೆಯ ಹೇಮಾವತಿ ಆಸ್ಪತ್ರೆ ಬಳಿಯ ದಿ.ಮಂಜುನಾಥ್ ಮಗ ಹೇಮಂತ್ (20) , ಹಾಸನ ಜಿಲ್ಲೆಯ ಪಾಂಡುರಂಗ ದೇವಸ್ಥಾನ ಬಳಿಯ ದಿ.ಸುಬ್ರಮಣ್ಯ ಮಗ ಹರ್ಷಿತ್ ಕುಮಾರ್ ಹೆಚ್.ಎಸ್(19) ಎಂಬವರನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇವರ ಜೊತೆ ಇಬ್ಬರು ಅಪ್ರಾಪ್ತ ಬಾಲಕರು ಕಳ್ಳತನದಲ್ಲಿ ಭಾಗಿಯಾಗಿದ್ದು ಅವರನ್ನು ಮನೆಯವರ ಜೊತೆ ನೋಟಿಸ್ ನೀಡಿ ಕಳುಹಿಸಿ ಕೊಡಲಾಗಿದೆ.
ಆರೋಪಿಗಳಿಂದ ನಾಲ್ಕು ವಾಹನಗಳು ವಶಕ್ಕೆ: ಆರೋಪಿಗಳು ಕಳವು ಮಾಡಿಕೊಂಡು ಹೋಗಿದ್ದ KA-21-Y-0967 ನೇ ನೋಂದಣಿ ಸಂಖ್ಯೆಯ YAMAHA ಕಂಪನಿಯ R15 ಮಾದರಿಯ ಮೋಟಾರ್ YAMAHA COMPANY RX 100 , KA 21 W 4320 ಸುಜುಕಿ ಜಿಕ್ಸರ್ ಮೋಟಾರ್ ಸೈಕಲ್ ,ಮೋಟರ್ ಸೈಕೆಲ್ ಮತ್ತು KA 20 ME 1456 ನೇ ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ 800 ಕಾರು ಸೇರಿ ಒಟ್ಟು ಮೂರು ಬೈಕ್ ಮತ್ತು ಒಂದು ಕಾರು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ ಎರಡು ಲಕ್ಷ ಅಗಿದೆ ಎನ್ನಲಾಗಿದೆ.
ಕಾರ್ಯಾಚರಣೆ: ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್ ಸಿ ಬಿ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ ಎನ್.ಎಂ ರವರ ಮತ್ತು ರಾಜೇಂದ್ರ ಡಿ.ಎಸ್ರವರ ಹಾಗೂ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ರವರ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ವಸಂತರಾಮ ಆಚಾರ್ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನಿಲ್ ಕುಮಾರ್ ಡಿ, ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ರವರ ನೇತೃತ್ವದಲ್ಲಿ ಸಿಬ್ಬಂದಿ ಎ.ಎಸ್.ಐ ಸ್ಯಾಮುವೆಲ್, ರಾಜೇಶ್ ಎನ್ ,ಶಶಿಧರ, ಪ್ರಶಾಂತ,ಅಸ್ಲಾಂ, ಸತೀಶ್ ನಾಯ್ಕ, ಕೃಷ್ಣಪ್ಪ,ಪ್ರಮೋದಿನಿ, ಮಲ್ಲಿಕಾರ್ಜುನ, ಅಭಿಜಿತ್, ಗೋವಿಂದ ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.