ಕುಪ್ಪೆಪದವು: ಕಿಡಿಗೇಡಿಗಳು ಸುಳ್ಳುಸುದ್ದಿ ಹಬ್ಬಿಸಿರುವುದರಿಂದ ಮಂಗಳೂರು ತಾಲೂಕಿನ ಕುಪ್ಪೆಪದವು ಕಿಲೆಂಜಾರು ಗ್ರಾಮದ ಉಳಿಪ್ಪಾಡಿಗುತ್ತು ಮನೆಯ ತೇಜಾಕ್ಷಿ ಅವರು ಮಾನಸಿಕವಾಗಿ ನೊಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ:
ತೇಜಾಕ್ಷಿ ಅವರ ಮಾವ ದಯಾನಂದ ಶೆಟ್ಟಿ ಪುಣೆಯಲ್ಲಿ ವಾಸವಿದ್ದು, ಇವರು ಜೂನ್ 1ರಂದು ಕುಪ್ಪೆಪದವಿನ ತೇಜಾಕ್ಷಿ ಅವರ ಮನೆಗೆ ಬಂದಿರುತ್ತಾರೆ ಎಂದು ಊರಿನ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕುಪ್ಪೆಪದವಿನ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪಿ.ಡಿ.ಓ, ಆರೋಗ್ಯ ಇಲಾಖೆಯಿಂದ ನರ್ಸ್ ಮತ್ತು ಆಶಾಕಾರ್ಯಕರ್ತೆಯರು ಮನೆಗೆ ಬಂದು ವಿಚಾರಿಸಿರುತ್ತಾರೆ. ಆದರೆ ತೇಜಾಕ್ಷಿ ಅವರ ಮನೆಗೆ ಪರವೂರಿಂದ ಯಾವುದೇ ಅತಿಥಿಗಳು ಬಂದಿರುವುದಿಲ್ಲ ಹಾಗು ಅವರ ಮಾವ ಪುಣೆಯಲ್ಲಿಯೇ ಇರುವುದಾಗಿ ತಿಳಿದುಬಂದಿರುತ್ತದೆ.
ತೇಜಾಕ್ಷಿ ಅವರು ಸಾರ್ವಜನಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಜನರು ಇವರಲ್ಲಿ ವ್ಯವಹರಿಸುವಾಗ ಹಿಂದು-ಮುಂದು ಯೋಚಿಸುತ್ತಾರೆ. ಇದರಿಂದ ತೇಜಾಕ್ಷಿ ಅವರಿಗೆ ಮುಜುಗರ ಮತ್ತು ಅವಮಾನವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಮನನೊಂದ ತೇಜಾಕ್ಷಿ ತುಂಬಾ ಜಾಗರೂಕತೆಯಿಂದ ಕಾರ್ಯನಿರ್ವಹಿಸುತಿದ್ದು, ಹಾಗು ಇಂತಹ ಗಾಳಿಸುದ್ಧಿಯನ್ನು ಹಬ್ಬಿಸಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರಿಗೆ ಎಚ್ಚರಿಕೆ ನೀಡಬೇಕಾಗಿ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.
