ಚಿಕ್ಕಮಗಳೂರು: ಇಲ್ಲಿನ ಕೊಟ್ಟಿಗೆಹಾರದ ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಸುಂಕಸಾಲೆ ಸಕಿಪ್ರಾ ಶಾಲೆಯ ನೂತನ ಕಟ್ಟಡ ಹಾಗೂ ಸುಂಕಸಾಲೆಯ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸುಂಕಸಾಲೆ ಗ್ರಾ.ಪಂ ಮುಂಭಾಗ ಸಿಪಿಐ ಪಕ್ಷದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಮೂಡಿಗೆರೆ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಸುಂಕಸಾಲೆ ಸ ಕಿ ಪ್ರಾ ಶಾಲಾ ಕಟ್ಟಡ 30 ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಕಳಪೆ ಕಾಮಗಾರಿ ಮಾಡಲಾಗಿದೆ. ನೆಲಕ್ಕೆ ಜಲ್ಲಿ ಮಿಶ್ರಿತ ಕಾಂಕ್ರೀಟ್ ಹಾಕುವ ಬದಲು ಬರೀ ಮಣ್ಣು ಹಾಕಿ ಮೇಲ್ಭಾಗಕ್ಕೆ ಸಿಮೆಂಟ್ ಮಿಶ್ರಿತ ನೀರಿನ ಲೇಪ ಹಾಕಲಾಗಿದೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೂಡಲೇ ಕಳಪೆ ಕಾಮಗಾರಿ ದುರಸ್ಥಿ ಪಡಿಸಬೇಕು ಮತ್ತು ಕಳಪೆ ಕಾಮಗಾರಿ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಐ ಕಳಸ ತಾಲೂಕು ಕಾರ್ಯದರ್ಶಿ ಗೋಪಾಲ್ ಎನ್ ಶೆಟ್ಟಿ ಮಾತನಾಡಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಯೋಜನೆಗಳು ಕೈಗೊಂಡಿದ್ದು ಹಲವು ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೊಂದು ಕಾಮಗಾರಿ ಮಾಡಿಯೇ ಇಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣ ಯಾರ ಪಾಲಾಯಿತು ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ಈ ಹಿಂದೆ 20013 ರಲ್ಲಿ ನ್ಯಾಯಾಲಯ ಅರಮನೆ ತಲಗೂರು ಗ್ರಾಮದ ಸರ್ವೆ ನಂಬರ್ 80 ರಲ್ಲಿ 4 ಎಕರೆ 20 ಗುಂಟೆ ಜಮೀನು ನಿವೇಶನ ರಹಿತರಿಗೆಂದು ಮಂಜೂರು ಮಾಡಿದರೂ ಸ್ಥಳೀಯ ಆಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ನಿರತ ಸ್ಥಳಕ್ಕೆ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಹರ್ಷಕುಮಾರ್ ಭೇಟಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧರಣಿ ನಿರತರು ಒತ್ತಾಯಿಸಿದರು. ಧರಣಿ ನಿರತರ ಮನವೊಲಿಸಿದ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಹರ್ಷಕುಮಾರ್ ಅವರು ಒಂದು ವಾರದೊಳಗೆ ಈ ಬಗ್ಗೆ ಪರಿಶೀಲಿಸಿ ಕ್ರಮಗೊಳ್ಳುವ ಭರವಸೆ ನೀಡಿದ ನಂತರ ಧರಣಿ ನಿರತರು ತಾತ್ಕಾಲಿಕವಾಗಿ ಧರಣಿ ಹಿಂಪಡೆದುಕೊಂಡರು ಮತ್ತು ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಧರಣಿ ನಿರತರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರಾದ ರವಿ ಸುಂಕಸಾಲೆ, ಪ್ರಶಾಂತ್, ರವಿ ಬಲಿಗೆ, ಸುಂದರ್ ಬಾಳೂರು, ಉಮೇಶ್ ಮುಂತಾದವರು ಉಪಸ್ಥಿತರಿದ್ದರು.