ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ ದವಸಧಾನ್ಯ ಹಾಗೂ ಪುಷ್ಪಗಳಿಂದ ರಚಿಸಿದ ತಿರಂಗಾ ಕಲಾಕೃತಿಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಈ ಕಲಾಕೃತಿಗೆ ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಕಡೆಯೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಕಾಣಿಸುತ್ತಿವೆ. ಇದಕ್ಕೆ ಪೂರಕವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಕೂಡ ವಿಶೇಷವಾದ ತಿರಂಗಾ ರಚಿಸಲಾಗಿದೆ. ಆಕರ್ಷಕವಾದ ಈ ತಿರಂಗಾ ಕಲಾಕೃತಿಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ ಎಂದರು.
ಗುರು ಬೆಳದಿಂಗಳು ಫೌಂಡೇಷನ್ನ ಅಧ್ಯಕ್ಷ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ‘ಧವಸಧಾನ್ಯ ಹಾಗೂ ತರಕಾರಿ ಬಳಸಿ ರಾಷ್ಟ್ರಧ್ವಜದ ಚಿತ್ರಾಕೃತಿ ಮಾಡಲಾಗಿದೆ. ಕೇಸರಿ ಬಣ್ಣಕ್ಕಾಗಿ ೩೦೦ ಕಿಲೋ ಕೆಂಪು ತೊಗರಿ, ಬಿಳಿ ಬಣ್ಣಕ್ಕಾಗಿ ೩೦೦ ಕಿಲೋ ಸಾಗು, ಹಸಿರು ಬಣ್ಣಕ್ಕಾಗಿ ೩೦೦ ಕಿಲೋ ಹೆಸರುಕಾಳು ಬಳಸಲಾಗಿದೆ. ಬೆಂಡೆಕಾಯಿ, ಮೂಲಂಗಿ, ಕ್ಯಾರೆಟ್ ಮುಂತಾದ ೧೦೦ ಕಿಲೋ ತರಕಾರಿ ಜೋಡಿಸಲಾಗಿದೆ ಎಂದರು.
ಕಲಾವಿದ ಹಾಗೂ ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ 30 ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗವು 18 ಗಂಟೆಯ ಅವಧಿಯೊಳಗೆ ಈ ಕಲಾಕೃತಿಯನ್ನು ರಚಿಸಿದ್ದಾರೆ. 38 ಅಡಿಯ ವೃತ್ತದಲ್ಲಿ 54 ಕಳಶವಿಟ್ಟು, 108 ಬಾಲೆ ಎಲೆ, 500 ವೀಳ್ಯದೆಲೆ, 100 ಕೆಜಿ ಬೆಳ್ತಿಗೆ ಅಕ್ಕಿ ಬಳಸಲಾಗಿದೆ. ಸೀಮಿತ ದಿನದವರೆಗೆ ಈ ಪ್ರದರ್ಶನದ ಬಳಿಕ ದವಸಧಾನ್ಯವನ್ನು ಬಡವರಿಗೆ ಹಂಚಲಾಗುವುದು ಎಂದು ಪದ್ಮರಾಜ್ ಆರ್. ತಿಳಿಸಿದರು.