ಉಡುಪಿ; ಅಪರೂಪದ ವಿವಾಹವೊಂದಕ್ಕೆ ಕೃಷ್ಣನಗರಿ ಸಾಕ್ಷಿಯಾಗಿದೆ. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಆಶ್ರಯದಲ್ಲಿದ್ದ ಅನಾಥ ಯುವತಿಗೆ ಡಿಸಿ, ಶಾಸಕರು ಮುಂದಾಳತ್ವದಲ್ಲಿ ಅದ್ದೂರಿ ವಿವಾಹ ನೆರವೇರಿದೆ.
ನಿಟ್ಟೂರು ಮಹಿಳಾ ನಿಲಯದಲ್ಲಿದ್ದ ಜಯಶ್ರೀ ಎಂಬಾಕೆಯನ್ನು ದಾವಣಗೆರೆ ಜಿಲ್ಲೆಯ ಸವಳಂಗ ಗ್ರಾಮದ ಕೃಷಿಕ ಮಲ್ಲೇಶ ಡಿ.ಎಲ್.ಅವರಿಗೆ ವಿವಾಹ ಮಾಡಿಕೊಡಲಾಯಿತು. ವಧು ಹಾಗೂ ವರ ಇಬ್ಬರೂ 9ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ.ಅನಾಥೆಯನ್ನು ತಾನು ವರಿಸಬೇಕೆಂದು ನಿಶ್ಚಯಿಸಿದ್ದ ವರ ಮಹಿಳಾ ನಿಲಯದಲ್ಲಿ ವಿಚಾರಿಸಿದ್ದರು.ಅನಂತರ ಜಿಲ್ಲಾಧಿಕಾರಿ ನೇತೃತ್ವದ ವ್ಯವಸ್ಥಾಪನ ಸಮಿತಿಯಲ್ಲಿ ನಿರ್ಣಯಿಸಿ ಅದಕ್ಕೆ ಬೇಕಿರುವ ತಯಾರಿ ನಡೆಸಿ ವರನ ಬಗ್ಗೆ ಎಲ್ಲ ರೀತಿಯ ಮಾಹಿತಿ ಕಲೆಹಾಕಿ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಗುರುವಾರ ಅರಶಿನಶಾಸ್ತ್ರ ನಡೆದು ವಿವಾಹ ನೋಂದಣಿ ನಡೆಯಿತು.ಶುಕ್ರವಾರ ಅಧಿಕೃತವಾಗಿ ಮದುವೆ ಮಾಡಲಾಯಿತು.ವಧುವಿನ ಹೆಸರಿನಲ್ಲಿ 60 ಸಾವಿರ ಠೇವಣಿ ಕೂಡ ಇದೇ ವೇಳೆ ಇರಿಸಲಾಗಿದೆ. ಈ ಮೂಲಕ ಅನಾಥ ಯುವತಿಗೆ ಹೊಸ ಬದುಕು ಸಿಕ್ಕಿದೆ. ವಿವಾಹದ ವೇಳೆ ಶಾಸಕ ರಘುಪತಿ ಭಟ್,ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್,ಡಿಸಿ ಕೂರ್ಮಾರಾವ್,ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಸೇರಿ ಹಲವರು ಉಪಸ್ಥಿತರಿದ್ದರು.